ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ರಾಜಕೀಯ ಮುದ್ಸದ್ಧಿಗಳು, ಹಾಲಿ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನೇಕರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲು ಸಂಪರ್ಕ ಮಾಡುತ್ತಿದ್ದಾರೆ. ಮಧ್ಯವರ್ತಿಗಳನ್ನ ನನ್ನ ಬಳಿ ಕಳಿಸಿ ಪಾರ್ಟಿಗೆ ಸೇರಿಸಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದಾರೆ. ಬಿಜೆಪಿಯ ಮಿಷನ್ 150ಕ್ಕೆ ಕಲ್ಯಾಣ ಕರ್ನಾಟಕದಿಂದ ಅತಿ ಹೆಚ್ಚು ಶಾಸಕರನ್ನ ಕೊಡುತ್ತೇವೆ. ನನ್ನ ಸಂಪರ್ಕದಲ್ಲೂ ಅನೇಕರಿದ್ದಾರೆ. ಸಮಯ ಬಂದಾಗ ರಿವೀಲ್ ಮಾಡುವೆ. ಈಗಾಗಲೇ ಈ ವಿಚಾರವನ್ನ ಸಿಎಂ ಮತ್ತು ವರಿಷ್ಠರ ಗಮನಕ್ಕೆ ತಂದಿರುವೆ. ಹೈಕಮಾಂಡ್ ಗ್ರಿನ್ ಸಿಗ್ನಲ್ ಕೊಟ್ಟ ಬಳಿಕ ಎಲ್ಲರನ್ನೂ ಬಿಜೆಪಿಗೆ ಕರೆತರುವೆ. 2023ರ ಚುನಾವಣೆಯನ್ನ ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಮಾಡುತ್ತೇವೆ. ಸಚಿವ ಸಂಪುಟ ರಚನೆಯೋ, ವಿಸ್ತರಣೆಯೋ ಮಾಹಿತಿ ಇಲ್ಲ. ಸುಮಲತಾ ಅಂಬರೀಷ್ ಉತ್ತಮ ಕಲಾವಿದೆ, ರಾಜಕೀಯ ಹಿನ್ನೆಲೆ ಹೊಂದಿದವರು. ಅವರು ಬಿಜೆಪಿಗೆ ಬರುವುದರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬರಲಿದೆ ಎಂದರು.