ಡಿಎಚ್ಒ ಡಾ.ವೈ.ರಮೇಶಬಾಬು ಸಲಹೆ ವಿಜಯವಾಣಿ ಸುದ್ದಿಜಾಲ ಬಳ್ಳಾರಿ ಬಳ್ಳಾರಿ : ಗರ್ಭಿಣಿಯರು ಯಾವುದೇ ತರಹದ ನೋವು ಕಂಡು ಬಂದರೂ ಸಹ ನಿರ್ಲಕ್ಷ್ಯ ಮಾಡದೆ ಹತ್ತಿರ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಬೇಕು ಎಂದು ಡಿಎಚ್ಒ ಡಾ.ವೈ.ರಮೇಶ ಬಾಬು ಹೇಳಿದರು. ಕುರುಗೋಡು ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಕ್ಷೇತ್ರದ ಬೇಟಿಯ ಸಂದರ್ಭದಲ್ಲಿ ಗರ್ಭಿಣಿ ತಾಯಿಯ ಮನೆ ಭೇಟಿ ಕೈಗೊಂಡು ತಾಯಿ ಕಾರ್ಡ, ತೂಕ, ದೇಹದಲ್ಲಿ ರಕ್ತದ ಪ್ರಮಾಣ ಮುಂತಾದವುಗಳನ್ನು ಪರಿಶೀಲಿಸಿ ಮಾತನಾಡಿದರು. ಶಿಶು ಮತ್ತು ತಾಯಿ ಮರಣವನ್ನು ತಡೆಗಟ್ಟಲು ಗರ್ಭಿಣಿ ಎಂದು ಗೊತ್ತಾದ ದಿನದಿಂದ ಅಗತ್ಯ ಪರೀಕ್ಷೆಗಳು, ದೇಹದಲ್ಲಿ ರಕ್ತದ ಪ್ರಮಾಣ ಅನುಸಾರ ಕಬ್ಬಿಣಾಂಶ ಮಾತ್ರೆಗಳ ಸೇವನೆ, ತೂಕ, ರಕ್ತದೊತ್ತಡ, ಎಚ್ಐವಿ, ಹೆಚ್ಬಿಎಸ್ಎಜಿ ಮುಂತಾದ ಅಗತ್ಯ ಪರೀಕ್ಷೆಗೆ ಒಳಗಾಗಬೇಕು ಎಂದು ಸಲಹೆ ಮಾಡಿದರು. ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಲು ಕುಟುಂಬದ ಸದಸ್ಯರಿಗೆ ತಿಳಿಸುವುದರ ಜೊತೆಗೆ ಪ್ರಸ್ತುತ ಪ್ರಖರ ಬಿಸಿಲಿನ ಹಿನ್ನಲೆಯಲ್ಲಿ ಗರ್ಭಿಣಿಯರ ಹೆಚ್ಚು ಪೌಷ್ಟಿಕಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಸಾದ್ಯವಾದಷ್ಟು ಹೆಚ್ಚು ನೀರು ಕುಡಿಯುವುದಕ್ಕೆ ಕುಟುಂಬದ ಸದಸ್ಯರಿಗೆ ತಿಳಿಸಿದರು.