ಕೋಲ್ಕತ: ಬಿಸಿಸಿಐ ವಾರ್ಷಿಕ ಮಹಾಸಭೆಗೆ ಪೂರ್ವಭಾವಿಯಾಗಿ ಶುಕ್ರವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ತಲಾ 15 ಓವರ್ಗಳ ಸೌಹಾರ್ದ ಪಂದ್ಯದಲ್ಲಿ ಕಾರ್ಯದರ್ಶಿ ಜಯ್ ಷಾ ಸಾರಥ್ಯದ ತಂಡ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದ ತಂಡವನ್ನು ಕೇವಲ 1 ರನ್ನಿಂದ ಸೋಲಿಸಿತು.
6ನೇ ಕ್ರಮಾಂಕದಲ್ಲಿ ಫಿನಿಷರ್ ಪಾತ್ರದಲ್ಲಿ ಕಾಣಿಸಿಕೊಂಡ ಗಂಗೂಲಿ 20 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಸಹಿತ 35 ರನ್ ಬಾರಿಸಿ ಮಿಂಚಿದರು. ಆದರೆ ಪಂದ್ಯದ ನಿಯಮದನ್ವಯ ಅವರು 35 ರನ್ ಗಳಿಸಿದ ಬಳಿಕ ನಿವೃತ್ತಿ ಹೊಂದಬೇಕಾಗಿತ್ತು. ಇದರಿಂದಾಗಿ ಕೊನೆಯಲ್ಲಿ ಅವರ ತಂಡಕ್ಕೆ ಕೇವಲ 1 ರನ್ನಿಂದ ನಿರಾಸೆ ಎದುರಾಯಿತು. ಸ್ಪಿನ್ ಬೌಲರ್ ಜಯ್ ಷಾ 58 ರನ್ಗೆ 3 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು ಮತ್ತು ಅಧ್ಯಕ್ಷರಿಗೆ ತವರು ಮೈದಾನದಲ್ಲೇ ಸೋಲುಣಿಸಿ ಬೀಗಿದರು.
ಗಂಗೂಲಿ ತಂಡದಲ್ಲಿ ಆಡಿದ, ಈಡನ್ನಲ್ಲಿ ಅಮೋಘ ದಾಖಲೆ ಹೊಂದಿದ್ದ ಮೊಹಮದ್ ಅಜರುದ್ದೀನ್ ಕೇವಲ 2 ರನ್ ಗಳಿಸಿ ಜಯ್ ಷಾ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಗೋವಾ ಕ್ರಿಕೆಟ್ ಸಮಸ್ಥೆಯ ಸೂರಜ್ ಲೊಟ್ಲಿಕರ್ ಕೂಡ ಜಯ್ ಷಾಗೆ ವಿಕೆಟ್ ಒಪ್ಪಿಸಿದರು. ಆತಿಥೇಯ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ (13) ಜಯ್ ಷಾಗೆ 3ನೇ ಬಲಿಯಾದರು.
ಇದಕ್ಕೆ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಕಾರ್ಯದರ್ಶಿ ಇಲೆವೆನ್ ಪರ ಖಜಾಂಚಿ ಅರುಣ್ ಧುಮಾಲ್ (36) ಮತ್ತು ಜೈದೇವ್ ಷಾ (40) 98 ರನ್ ಜತೆಯಾಟವಾಡಿ ಉತ್ತಮ ಮೊತ್ತ ಪೇರಿಸಲು ನೆರವಾದರು. ಹೊಸ ಚೆಂಡು ಹಂಚಿಕೊಂಡ ಅಜರುದ್ದೀನ್ ಮತ್ತು ಗಂಗೂಲಿ ಒಟ್ಟು 5 ಓವರ್ ಬೌಲಿಂಗ್ ಮಾಡಿದರು. ಗಂಗೂಲಿ 19 ರನ್ಗೆ 1 ವಿಕೆಟ್ ಗಳಿಸಿದರು.
ಬಿಸಿಸಿಐ ಕಾರ್ಯದರ್ಶಿ ಇಲೆವೆನ್: 3 ವಿಕೆಟ್ಗೆ 128 (ಜೈದೇವ್ 40, ಧುಮಾಲ್ 36, ಜಯ್ ಷಾ 10*, ಗಂಗೂಲಿ 19ಕ್ಕೆ 1), ಬಿಸಿಸಿಐ ಅಧ್ಯಕ್ಷರ ಇಲೆವೆನ್: 5 ವಿಕೆಟ್ಗೆ 127 (ಗಂಗೂಲಿ 35, ಅಜರುದ್ದೀನ್ 2, ಅವಿಷೇಕ್ ದಾಲ್ಮಿಯಾ 13, ಜಯ್ ಷಾ 58ಕ್ಕೆ 3).