ಹೂವಿನಹಡಗಲಿ: ತಾಲೂಕಿನ ಹಕ್ಕಂಡಿ ಗ್ರಾಮದ ಮರಳು ಸ್ಟಾಕ್ಯಾರ್ಡ್ನಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸದೆ ಮರಳು ಸಾಗಿಸಲಾಗುತ್ತಿದೆಂದು ಆರೋಪಿಸಿ ಕನ್ನಡ ಸೇನೆ ಸಂಘಟನೆ ತಾಲೂಕು ಘಟಕ ಶುಕ್ರವಾರ ತಹಸೀಲ್ದಾರ್ ಎ.ಎಚ್.ಮಹೇಂದ್ರಗೆ ಮನವಿ ಸಲ್ಲಿಸಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಕಲಿಕೇರಿ ಬಸವರಾಜ್ ಮಾತನಾಡಿ, ಹಕ್ಕಂಡಿ ಮರಳು ಸ್ಟಾಕ್ಯಾರ್ಡನಲ್ಲಿ ರಾತ್ರೋರಾತ್ರಿ ಟ್ರಾೃಕ್ಟರ್ ಮೂಲಕ ಅಕ್ರಮವಾಗಿ ಮರಳನ್ನು ಸಾಗಣೆ ಮಾಡಲಾಗುತ್ತಿದೆ. ಇಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಕೂಡಲೇ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸರ್ಕಾರದ ನಿಯಮದಂತೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅವುಗಳನ್ನು ಆಫ್ ಮಾಡಿ ಮರಳು ಸಾಗಿಸಲಾಗುತ್ತಿದೆ. ತಾಲೂಕಿನ ಬಡವರಿಗೆ ಮನೆ ಕಟ್ಟಲು ಮರಳು ಸಿಗುತ್ತಿಲ್ಲ. ಮರಳು ಲೂಟಿ ಮಾಡುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸ್ಟಾಕ್ಯಾರ್ಡ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಮಲ್ಲಿಗೆ ನಾಡಾಭಿವೃದ್ದಿ ಸಂಘದ ಅಧ್ಯಕ್ಷ ಹೊಸಮನಿ ಅಂಜಿನಪ್ಪ, ಮುಖಂಡರಾದ ಎಚ್.ಚಂದ್ರಪ್ಪ, ಪ್ರಕಾಶ್ ಇತರರಿದ್ದರು.