ದೇವದುರ್ಗ: ಎರಡು ದಿನ ಸ್ವಲ್ಪಮಟ್ಟಿಗೆ ಹರಿವು ತಗ್ಗಿದ ಕೃಷ್ಣಾ ನದಿಯಲ್ಲಿ, ಮಂಗಳವಾರ ಸಂಜೆಯಿಂದ ನಿಧಾನವಾಗಿ ಹೆಚ್ಚಳವಾಗುತ್ತಿದೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ಬುಧವಾರ ಮಧ್ಯಾಹ್ನ 3.86 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ತಾಲೂಕಿನಲ್ಲಿ ಮತ್ತೊಮ್ಮೆ ನೆರೆಯ ಕಾರ್ಮೋಡ ಆವರಿಸಿದೆ.
ಕೃಷ್ಣಾ ನದಿ ದಂಡೆ ಹಾಗೂ ಮೇಲ್ಭಾಗದಲ್ಲಿ ಅಷ್ಟಾಗಿ ಮಳೆ ಬೀಳುತ್ತಿಲ್ಲವಾದರೂ, ಆಲಮಟ್ಟಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರ ಹಾಗೂ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಜಲಾಶಯಕ್ಕೆ 4 ಲಕ್ಷ ಕ್ಯೂಸೆಕ್ ನೀರು ಒಳ ಬರುತ್ತಿದೆ. ಇದರಿಂದ ಎರಡು ಜಲಾಶಯಗಳು ಬಹುತೇಕ ಭರ್ತಿಯಾಗಿರುವ ಕಾರಣ, ಮುಂಜಾಗ್ರತಾ ಕ್ರಮವಾಗಿ ಬಂದ ನೀರನ್ನು ಯಥಾವತ್ತಾಗಿ ಕೃಷ್ಣಾನದಿಗೆ ಹರಿಸಲಾಗುತ್ತಿದೆ.
ಬುಧವಾರ ಬೆಳಗ್ಗೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಕೂಡ ಕಳೆದ ಒಂದು ವಾರದಿಂದ ಜಲಾವೃತವಾಗಿದೆ. ಅಲ್ಲದೆ, ಕೊಪ್ಪರದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಸುತ್ತಲೂ ಅಪಾರ ಪ್ರಮಾಣದ ನೀರು ಆವರಿಸಿದೆ. ಗೂಗಲ್ ಶ್ರೀ ಅಲ್ಲಮಪ್ರಭು ದೇವಸ್ಥಾನ ಸಮೀಪ ನೀರು ಬಂದಿದ್ದರೆ, ವೀರಗೋಟದ ಶ್ರೀ ಆದಿಮೌನ ಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದಲ್ಲದೆ ನದಿದಂಡೆ ಗ್ರಾಮಗಳ ಜಮೀನಿಗೆ ನೀರು ನುಗ್ಗಿದ್ದು, ಗ್ರಾಮಸ್ಥರಿಗೆ ನೆರೆ ಆತಂಕ ಮನೆ ಮಾಡಿದೆ.
ಯಾರ ಸ್ಪಂದನೆಯೂ ಇಲ್ಲ : ತಾಲೂಕಿನಲ್ಲಿ ನೆರೆ ಆತಂಕ ಮುಂದುವರಿದಿದ್ದರೂ ತಹಸೀಲ್ದಾರ್ ಇಲ್ಲದ ಕಾರಣ ನೆರೆ ಎದುರಿಸಲು ಯಾರೂ ಮುಂದೆ ಬರುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನದಿದಂಡೆ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಆತ್ಮವಿಶ್ವಾಸ ತುಂಬಬೇಕಿದೆ.
ಆಲಮಟ್ಟಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ನಾರಾಯಣಪುರ ಜಲಾಶಯದಲ್ಲಿ ಸದ್ಯ 4 ಲಕ್ಷ ಕ್ಯೂಸೆಕ್ ನೀರು ಒಳ ಬರುತ್ತಿದೆ. ನಾವು ಕೃಷ್ಣಾನದಿಗೆ 30 ಕ್ರಸ್ಟಗೇಟ್ ಮೂಲಕ 3.86 ಲಕ್ಷ ಕ್ಯೂಸೆಕ್ ಹೊರಬಿಡುತ್ತಿದ್ದೇವೆ. ರಾತ್ರಿ ಇಲ್ಲವೇ ನಾಳೆಗೆ ಇದರ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
| ರಾಮನಗೌಡ ಹಳ್ಳೂರು , ನಾರಾಯಣಪುರ ಜಲಾಶಯದ ಎಇಇ
ಕೃಷ್ಣಾ ನದಿಯಲ್ಲಿ ಹೆಚ್ಚಿದ ಪ್ರವಾಹ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆ
ಲಿಂಗಸುಗೂರು: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 30 ಕ್ರಸ್ಟ್ಗೇಟ್ಗಳನ್ನು ಎರಡು ಮೀಟರ್ ಎತ್ತರಿಸಿ ಮಂಗಳವಾರ 3.86 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು, ತಾಲೂಕಿನ ಶೀಲಹಳ್ಳಿ ಬಳಿಯ ಸೇತುವೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ಮಹಾರಾಷ್ಟ್ರದ ಕೋಯಿನಾ ಜಲಾಶಯದಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ನೀರು ಬಸವಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 492.252 ಮೀ. ಇದ್ದು, ಮಂಗಳವಾರ 489.680 ಮೀಟರ್ ನೀರಿನ ಸಂಗ್ರಹಿಸಿಕೊಂಡು ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ.
ಜಮೀನುಗಳು ಜಲಾವೃತ: ಇದರಿಂದ ತಾಲೂಕಿನ ಗುಂತಗೋಳ, ಗೋನವಾಟ್ಲ ಸೇರಿ ನದಿ ತೀರದ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳ ಜಲಾವೃತಗೊಂಡು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಇತ್ತ ಶೀಲಹಳ್ಳಿ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ಸೇತುವೆ ಮೇಲೆ ಸಾರ್ವಜನಿಕರ ಮತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆಯ ಎರಡೂ ಬದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಶೀಲಹಳ್ಳಿ, ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಸಾರ್ವಜನಿಕರು ಜಲದುರ್ಗ ಮಾರ್ಗವಾಗಿ ತಾಲೂಕು ಕೇಂದ್ರಕ್ಕೆ 45 ಕಿಮೀ. ಸುತ್ತುವರಿದು ಸಂಚರಿಸುತ್ತಿದ್ದಾರೆ.