ನಿಪ್ಪಾಣಿ: ಸ್ಥಳೀಯ ಔದ್ಯೋಗಿಕ ವಸಾಹತಿಗೆ 5 ಕೋಟಿ ರೂ. ಅನುದಾನ ಕಲ್ಪಿಸಿ 3.25 ಕಿ.ಮೀ. ರಸ್ತೆ ಹಾಗೂ 6.5 ಕಿ.ಮೀ. ಒಳಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಪೈಪ್ಲೈನ್, ನೀರು, ವಿದ್ಯುತ್ ಸೇರಿ ಮತ್ತಿತರ ಸೌಕರ್ಯ ಕಲ್ಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಸ್ಥಳೀಯ ದಿ.ನಿಪ್ಪಾಣಿ ಸಹಕಾರಿ ಔದ್ಯೋಗಿಕ ವಸಾಹತಿನಲ್ಲಿ ಕೆಐಎಡಿಬಿಯಿಂದ ಅನುಮೋದನೆಗೊಂಡ 5 ಕೋಟಿ ರೂ. ವೆಚ್ಚದ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶಾಸಕರ ನಿಧಿಯಿಂದ 25 ಲಕ್ಷ ರೂ., ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ನಿಧಿಯಿಂದ 25 ಲಕ್ಷ ರೂ., ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ನಿಧಿಯಿಂದ 25 ಲಕ್ಷ ರೂ. ಮತ್ತು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ (ಅಧಿಕಾರವಧಿಯಲ್ಲಿ) ಅವರ ನಿಧಿಯಿಂದ 25 ಲಕ್ಷ ರೂ. ಸೇರಿ ಒಟ್ಟು 1 ಕೋಟಿ ರೂ. ಅನುದಾನ ಸಂಗ್ರಹವಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿಧಿಯಿಂದ 25 ಲಕ್ಷ ರೂ. ಮತ್ತು ಸಂಸದ ರಾಜೀವ ಚಂದ್ರಶೇಖರ ಅವರ ನಿಧಿಯಿಂದ 25 ಲಕ್ಷ ರೂ. ಅನುದಾನ ಸಿಗಲಿದೆ ಎಂದು ತಿಳಿಸಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಔದ್ಯೋಗಿಕ ವಸಾಹತಿನಲ್ಲಿ ಅಭಿವೃದ್ಧಿಯಾಗಬೇಕಾದರೆ ಇಲ್ಲಿನ ಎಲ್ಲ ಉದ್ಯಮಿಗಳು ಮುಂದೆ ಬರುವ ಅವಶ್ಯಕತೆ ಇದೆ. ಎಲ್ಲರ ವಿಚಾರಗಳು ಒಮ್ಮತವಾಗಿಲ್ಲದ ಪರಿಣಾಮ ಇಲ್ಲಿ ಆಡಳಿತಾಧಿಕಾಗಳು ನೇಮಕಗೊಂಡಿದ್ದಾರೆ. ಸಾಧಕ-ಬಾಧಕ ಕುರಿತು ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದರು. ಉದ್ಯಮಿ ಗಿತೇನ ಶಹಾ ಮಾತನಾಡಿದರು. ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ವೈಸ್-ಚೇರ್ಮನ್ ಮಲಗೊಂಡ ಪಾಟೀಲ, ಸಂಚಾಲಕ ರಾಮಗೊಂಡ ಪಾಟೀಲ, ಅವಿನಾಶ ಪಾಟೀಲ, ಸಮಿತ ಸಾಸನೆ, ಜಿಪಂ ಸದಸ್ಯ ಸಿದ್ದು ನರಾಟೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಕೆಐಎಡಿಬಿ ಅಧಿಕಾರಿ ನೇರ್ಲೆ, ಔದ್ಯೋಗಿಕ ವಸಾಹತು ಆಡಳಿತಾಧಿಕಾರಿ ಸತೀಶ ಮುಚ್ಚಂಡಿ,
ದಿಲೀಪ ಚವ್ಹಾಣ, ಅನಿಲ ಬೆನ್ನಳ್ಳಿ, ಲಖಮಗೊಂಡ ಪಾಟೀಲ ಇತರರು ಇದ್ದರು.