ಬೆಳಗಾವಿ: ತುರ್ತು ಸೇವೆಗಾಗಿ ಪೊಲೀಸರನ್ನು ಸಂಪರ್ಕಿಸಲು ಡೈಲ್ 100 ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ತಕ್ಷಣವೇ ತುರ್ತು ಸೇವೆ ಸಲ್ಲಿಸುವ ಉದ್ದೇಶದಿಂದ ‘ಒಂದು ದೇಶ ಒಂದೇ ತುರ್ತು ಕರೆ’ ಎಂಬ ಪರಿಕಲ್ಪನೆಯಲ್ಲಿ ತುರ್ತು ಸಂಪರ್ಕಕ್ಕಾಗಿ ‘ನಮ್ಮ 112 ಡೈಲ್’ ಸಂಖ್ಯೆ ಆರಂಭಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್ ಹೇಳಿದ್ದಾರೆ.
ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ವೈದ್ಯಕೀಯ ಅಥವಾ ಯಾವುದೇ ತುರ್ತು ಸಂದರ್ಭಗಳಲ್ಲಿ ತ್ವರಿತ ಸೇವೆ ನೀಡಲು ಸ್ಥಾಪಿಸಲಾಗಿರುವ ತುರ್ತು ಸ್ಪಂದನ, ಸಹಾಯ ವ್ಯವಸ್ಥೆ ಸಂಖ್ಯೆ ‘ನಮ್ಮ 112 ಡೈಲ್’ಗೆ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಭಾನುವಾರ ಚಾಲನೆ ನೀಡಿದರು. ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಕೇಂದ್ರಿಕೃತವಾಗಿ ಡೈಲ್-112 ಆರಂಭಿಸಲಾಗಿದೆ. ಸಾರ್ವಜನಿಕರು ಸಂಪರ್ಕಿಸಿದ ತಕ್ಷಣವೇ ಬೆಂಗಳೂರಿನಿಂದ ಇಲ್ಲಿನ ಕಂಟ್ರೋಲ್ ರೂಮ್ಗೆ ಮಾಹಿತಿ ನೀಡುತ್ತಾರೆ. ಅದಾದ 15 ನಿಮಿಷದೊಳಗೆ ಸ್ಥಳಕ್ಕೆ ತೆರಳಿ, ನಂತರದ 15 ನಿಮಿಷದಲ್ಲಿ ಅವರ ಸಮಸ್ಯೆಗೆ ಬಗೆಹರಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ. ಅದಕ್ಕಾಗಿ 24್ಡ7 ಸೇವೆ ನೀಡಲು ವಾಹನಗಳು ಸಿದ್ಧವಾಗಿವೆ ಎಂದು ಮಾಹಿತಿ ನೀಡಿದರು.
ಆ್ಯಪ್ ಡೌನ್ಲೋಡ್ ಮಾಡಿ: ಧ್ವನಿ, ಎಸ್ಎಂಎಸ್, ಇ-ಮೇಲ್, 112 ಪೋರ್ಟಲ್ ಮತ್ತು ಪ್ಯಾನಿಕ್ ಆ್ಯಪ್ ಮೂಲಕ ಸಂಕಷ್ಟದಲ್ಲಿರುವ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ. ಗೂಗಲ್ ಪ್ಲೇಸ್ಟೋರ್ನಲ್ಲಿ ಡಯಲ್ 112 ಆ್ಯಪ್ ಇದ್ದು, ಅದನ್ನು ಡೌನ್ಲೋಡ್ ಮಾಡಿಕೊಂಡರೆ ಸಂಪರ್ಕಿತರ ಲೋಕೇಶನ್ ತಕ್ಷಣವೇ ತಿಳಿಯಲಿದೆ. ಒಟ್ಟಾರೆ ಇನ್ಮುಂದೆ ಪೊಲೀಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ಸೇವೆಗಳು ಸೇರಿ ಇನ್ನಿತರ ತುರ್ತು ಪರಿಸ್ಥಿತಿಯ ಸೇವೆಗಳು ಡೈಲ್-112ರಲ್ಲಿ ಸಾರ್ವಜನಿಕರಿಗೆ ಸಿಗಲಿದೆ ಎಂದು ಡಾ. ಕೆ.ತ್ಯಾಗರಾಜನ್ ಮಾಹಿತಿ ನೀಡಿದರು.