ನವದೆಹಲಿ: ಕಳೆದ ತಿಂಗಳಾಂತ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಸಿದಂತೆ ಸಂಸತ್ತಿನಲ್ಲಿಂದು ನಡೆದ ಚರ್ಚಾ ವೇಳೆ ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಅಮಿತ್ ಷಾ ಹರಿಹಾಯ್ದರು. ಇತರೆ ಪಕ್ಷಗಳ ವಿರುದ್ಧ ಬೊಟ್ಟು ಮಾಡಲು ಕಾಂಗ್ರೆಸ್ಗೆ ಯಾವುದೇ ಹಕ್ಕಿಲ್ಲ. ಅದರ ಸಾಧನೆಯ ಹಾದಿಯನೊಮ್ಮೆ ನೋಡಿಕೊಳ್ಳಲಿ ಎಂದು ಕುಟುಕಿದರು.
ಭಾರತದಲ್ಲಿ ಈವರೆಗೂ ನಡೆದಿರುವ ಗಲಭೆಯಲ್ಲಿ ಶೇ. 76 ರಷ್ಟು ಮಂದಿ ಕಾಂಗ್ರೆಸ್ ಆಡಳಿತಾವಧಿಯಲ್ಲೇ ಹತ್ಯೆಯಾಗಿದ್ದಾರೆ. ನಮ್ಮ ಪ್ರಶ್ನಿಸಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಲೋಕಸಭೆಯಲ್ಲಿ ಅಮಿತ್ ಷಾ ಗುಡುಗಿದರು. ಈಶಾನ್ಯ ದೆಹಲಿ ಗಲಭೆ ಉಲ್ಲೇಖಿಸಿ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿದ ಕಾಂಗ್ರೆಸ್ ನಾಯಕರಿಗೆ ಷಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಶಾಂತಿಗಾಗಿ ಗೃಹ ಸಚಿವರು ಮನವಿಯನ್ನೇ ಮಾಡಲಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ನಾನು ಮನವಿ ಮಾಡಿದ್ದೇನೆ. ನಾನು ಮಾಡದೇ ಇದಿದ್ದರೆ, “ದೊಡ್ಡ ಮರ ಬಿದ್ದಾಗ ಭೂಮಿ ನಡಗುತ್ತದೆ ಎಂದು ನಾನು ಹೇಳುತ್ತಿರಲಿಲ್ಲ” ಎಂದು ರಾಜೀವ್ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್ ಬಾಡಿಗಾರ್ಡ್ಗಳು ಹತ್ಯೆ ಮಾಡಿದ ಬಳಿಕ 1984ರಲ್ಲಿ ನಡೆದಿದ್ದ ಸಿಕ್ ವಿರೋಧಿ ಗಲಭೆ ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ನೀಡಿದ್ದ ಕುಖ್ಯಾತ ಹೇಳಿಕೆಯನ್ನು ಅಮಿತ್ ಷಾ ಕಾಂಗ್ರೆಸ್ಗೆ ಮರು ನೆನಪಿಸಿದರು.
ಸಿಖ್ ವಿರೋಧಿ ಗಲಭೆಯಲ್ಲಿ 3000 ಸಿಖ್ ಸಹೋದರ-ಸಹೋದರಿಯರನ್ನು ಕೊಲ್ಲಲಾಗಿತ್ತು. ಈ ವೇಳೆ ದೊಡ್ಡ ಮರಬಿದ್ದಾಗ ಭೂಮಿ ನಡುಗುತ್ತದೆ ಎಂದು ನಿಮ್ಮ ರೀತಿ ನಾವು ಹೇಳಲಿಲ್ಲ ಎಂದು ಷಾ ಹೇಳಿದರು. ಇತ್ತ ಅಮಿತ್ ಷಾ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮಧ್ಯದಲ್ಲೇ ಎದ್ದು ಸದನದಿಂದ ಹೊರನಡೆದರು. (ಏಜೆನ್ಸೀಸ್)