ನವದೆಹಲಿ: ಕರೊನಾ ತನ್ನ ಕರಾಳತೆಯನ್ನು ತೋರಿಸುತ್ತಲಿದೆ. ಪ್ರತಿದಿನ ಸಾವಿರಾರು ಜನರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಸೋಂಕಿತರ ಚಿಕಿತ್ಸೆಗೆ ನಿಂತಿರುವ ವೈದ್ಯರನ್ನೂ ಬಿಡದ ಸೋಂಕು ಈಗಾಗಲೇ ನೂರಾರು ವೈದ್ಯರ ಪ್ರಾಣ ತೆಗೆದಿದೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕರೊನಾದ ಎರಡನೇ ಅಲೆಯಲ್ಲಿ 719 ವೈದ್ಯರ ಬಲಿಯಾಗಿದ್ದಾರಂತೆ.
ಮೃತ ವೈದ್ಯರ ಪೈಕಿ ಅತಿ ಹೆಚ್ಚು ಅಂದರೆ 111 ವೈದ್ಯರು ಬಿಹಾರದವರಾಗಿದ್ದಾರೆ. ಅತಿ ಹೆಚ್ಚು ವೈದ್ಯರನ್ನು ಕಳೆದುಕೊಂಡ ರಾಜ್ಯಗಳ ಪಟ್ಟಿಯಲ್ಲಿ ಬಿಹಾರ ಮೊದಲನೆ ಸ್ಥಾನಲ್ಲಿದ್ದರೆ, 109 ವೈದ್ಯರೊಂದಿಗೆ ನವದೆಹಲಿ ಎರಡನೇ ಸ್ಥಾನ, 70 ವೈದ್ಯರೊಂದಿಗೆ ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಕರೊನಾ ಎರಡನೇ ಅಲೆಗೆ 9 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಪಟ್ಟಿ ತಿಳಿಸಿದೆ.
ಕರೊನಾ ಮೊದಲನೇ ಅಲೆಯನ್ನು ನಿಯಂತ್ರಣಕ್ಕೆ ತಂದಿದ್ದ ಭಾರತಕ್ಕೆ ಎರಡನೇ ಅಲೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಎಲ್ಲೆಡೆ ಆಕ್ಸಿಜನ್ ಸಮಸ್ಯೆ, ಬೆಡ್ ಕೊರತೆ ಉಂಟಾಗಿ ಸಾವಿರಾರು ಜನರನ್ನು ಕಳೆದುಕೊಳ್ಳುವಂತಾಯಿತು. ಇದೀಗ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದು, ಮೂರನೇ ಅಲೆಯ ನಿರೀಕ್ಷೆಯಲ್ಲಿರುವ ಸರ್ಕಾರ ಅದನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದೆ. (ಏಜೆನ್ಸೀಸ್)