More

    ಜಿಲ್ಲೆಯಾದ್ಯಂತ 700 ಕೋಟಿ ರೂ., ಬೆಳೆಹಾನಿ: ಡಿಸಿಗಳ ಖಾತೆಯಲ್ಲಿ 679 ಕೋಟಿ ರೂ., ಇದೆ ಎಂದ ಸಚಿವ ಅಶೋಕ್

    ಕುಣಿಗಲ್: ಮಳೆಹಾನಿಗೆ ಸಂಬಂಧಿಸಿದಂತೆ ಮೊದಲ ಹಾಗೂ ಎರಡನೇ ಹಂತ ಸೇರಿ 750 ಕೋಟಿ ರೂ., ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಪರಿಹಾರವನ್ನು ಶೀಘ್ರ ನೀಡುವಂತೆ ಮನವಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

    ಜಲಧಿಗೆರೆ ಹಾಗೂ ಬ್ಯಾಲದಕೆರೆ ಗ್ರಾಮಗಳಲ್ಲಿ ವಾರದಿಂದ ಸುರಿದ ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾದ ಪ್ರದೇಶಕ್ಕೆ ಬುಧವಾರ ಸಂಜೆ ಖುದ್ದು ರೈತರ ಹೊಲಗಳಲ್ಲಿ ಓಡಾಡಿ ಬೆಳೆಹಾನಿ ವೀಕ್ಷಿಸಿದ ಸಚಿವರು, ಎಲ್ಲ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 679 ಕೋಟಿ ರೂಪಾಯಿ ಇದ್ದು, ಮಳೆಯಿಂದ ಹಾನಿಗೊಳಗಾದವರಿಗೆ ತಕ್ಷಣವೇ ಪರಿಹಾರ ಒದಗಿಸಲು ಸೂಚನೆ ನೀಡಲಾಗಿದೆ ಎಂದರು.

    ವರದಿ ನೀಡಲು ಪತ್ರ: ವಾರದಿಂದ ಸತತವಾಗಿ ಸುರಿದ ಮಳೆಯಿಂದ ಹಾನಿಗೊಳಗಾಗಿರುವ ಬೆಳೆ, ಮನೆಗಳಿಗೆ ಹಾನಿ ವರದಿ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಸಂಪೂರ್ಣವಾಗಿ ಹಾನಿ ವರದಿ ಬಂದ ತಕ್ಷಣವೇ ಪರಿಹಾರ ನೀಡಲು ಕ್ರಮವಹಿಸಲಾಗುವುದು. ಪರಿಹಾರವನ್ನು ಹಾನಿಗೊಳಗಾದವರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಅಶೋಕ್ ತಿಳಿಸಿದರು.

    700 ಕೋಟಿ ನಷ್ಟ !: ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಭಾರೀ ಪ್ರಮಾಣದಲ್ಲಿ ಅಂದರೆ ವಾಡಿಕೆಗಿಂತ ಸುಮಾರು ಶೇ.1700 ಹೆಚ್ಚು ಮಳೆಯಾಗಿದೆ. ಇದರಿಂದ ಜಿಲ್ಲೆಯಾದ್ಯಂತ 1.27 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಅಂದಾಜು 700 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

    ಮಳೆಯಿಂದ ಪ್ರಾಥಮಿಕ ಸಮೀಕ್ಷೆ ಪ್ರಕಾರ ಮುಖ್ಯವಾಗಿ 1.11 ಲಕ್ಷ ಹೆಕ್ಟೇರ್‌ನಷ್ಟು ರಾಗಿ ಬೆಳೆ ಹಾನಿಯಾಗಿದೆ. ಅಲ್ಲದೇ 9 ರಿಂದ10 ಸಾವಿರ ಹೆಕ್ಟೇರ್ ಮೆಕ್ಕೆಜೋಳದ ಬೆಳೆಯೂ ಹಾನಿಯಾಗಿದೆ. ಅದೇ ರೀತಿ 1100 ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ. ಪರಿಹಾರವನ್ನು ಪ್ರತಿ ಹೆಕ್ಟೇರ್‌ಗೆ ಮಳೆಯಾಶ್ರಿತ ರಾಗಿ ಬೆಳೆಗೆ 6800 ರೂ., ನೀರಾವರಿ ಆಶ್ರಿತವಾದರೆ 13,500 ರೂ., ಹಾಗೂ ತೋಟಗಾರಿಕೆ ಬೆಳೆಗೆ 18 ಸಾವಿರ ರೂ., ಸಿಗಲಿದೆ ಎಂದು ತಿಳಿಸಿದರು.

    ಬೆಳೆ ಹಾನಿ ಹೊರತುಪಡಿಸಿ ರಸ್ತೆ, ಟ್ಯಾಂಕ್, ವಿದ್ಯುತ್ ಕಂಬ, ಟ್ರಾನ್‌ಸ್ಾರ್ಮರ್ , ಸಣ್ಣ ನೀರಾವರಿ ಕೆರೆಗಳ ಹಾನಿ ಸೇರಿ ಒಟ್ಟು 80 ಕೋಟಿ ರೂ., ನಷ್ಟ ಉಂಟಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಸುಮಾರು 800 ಕೋ.ರೂ., ನಷ್ಟ ಉಂಟಾಗಿದೆ ಎಂದು ಮಾಹಿತಿ ನೀಡಿದರು.

    ಸರ್ಕಾರದ ನಿರ್ದೇಶನದ ಪ್ರಕಾರ ಸಮೀಕ್ಷೆ ನಡೆಸಲಾಗುತ್ತಿದ್ದು, ಬೆಳೆ ಹಾಗೂ ಮನೆ ಹಾನಿಗಳಿಗೆ ಪರಿಹಾರ ಕಲ್ಪಿಸಲು ಪೋರ್ಟಲ್ನಲ್ಲಿ ನೋಂದಣಿ ಮಾಡಲಾಗುತ್ತಿದೆ. ಹಾನಿಗೊಳಗಾದ ಅರ್ಹ ಫಲಾನುಭವಿ ಪರಿಹಾರದಿಂದ ಕೈತಪ್ಪದಂತೆ ಕ್ರಮ ವಹಿಸಲಾಗಿದೆ. ಪರಿಹಾರ ಅನರ್ಹರ ಪಾಲಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಮೀಕ್ಷೆಯನ್ನು 10 ದಿನಗಳಲ್ಲಿ ಮುಗಿಸಲಾಗುವುದು ಎಂದು ತಿಳಿಸಿದರು.

    ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಎಸಿ ವಿ.ಅಜಯ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ, ತೋಟಗಾರಿಕೆ ಉಪನಿರ್ದೇಶಕ ಬಿ.ರಘು, ತಹಸೀಲ್ದಾರ್ ಮಹಾಭಲೇಶ್ವರ ಸೇರಿ ಮತ್ತಿತರರ ಅಧಿಕಾರಿಗಳು ಇದ್ದರು.

    ಸಚಿವರೆದುರು ಕಣ್ಣೀರಿಟ್ಟ ರೈತರು: ರಾಗಿ ಬೆಳೆ ಬೆಳೆಯುವುದಕ್ಕೆ ಪ್ರತಿ ಹೆಕ್ಟೇರ್‌ಗೆ 18 ರಿಂದ 25 ಸಾವಿರ ರೂ., ಖರ್ಚು ಬಂದಿದೆ. ಸರ್ಕಾರ 1 ಹೆಕ್ಟೇರ್‌ಗೆ ಕೇವಲ್ 6 ಸಾವಿರ ರೂಪಾಯಿ ಪರಿಹಾರ ನಿಗದಿಪಡಿಸಿದ್ದು, ಪರಿಹಾರ ಹೆಚ್ಚು ಮಾಡುವಂತೆ ಸಚಿವರನ್ನು ರೈತ ರಂಗಸ್ವಾಮಿ ಒತ್ತಾಯಿಸಿದರು. ಈ ವೇಳೆ ಮಳೆಯಿಲ್ಲದೆ ಕಳೆದ ವರ್ಷ ಬೆಳೆ ಇರಲಿಲ್ಲ. ಈ ವರ್ಷ ಬಿತ್ತನೆ ಮಾಡಿರುವುದು ಎಲ್ಲ ನೀರು ಪಾಲಾಗಿದೆ. ಸರ್ಕಾರ ಕೊಡುವ ದುಡ್ಡು ದನದ ಮೇವಿಗೂ ಸಾಕಾಗಲ್ಲ. ಒಂದು ಹೆಕ್ಟೇರ್ ಗೆ 50 ಸಾವಿರ ರೂಪಾಯಿ ಖರ್ಚಾಗಿದೆ. ಹೆಚ್ಚು ಪರಿಹಾರ ನೀಡುವಂತೆ ಸಚಿವರ ಮುಂದೆ ರೈತರು ಕಣ್ಣೀರಿಟ್ಟರು.

    ಪ್ರಸ್ತುತ ವರದಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 622 ಮನೆಗಳು ಹಾನಿಗೊಳಗಾಗಿವೆ. 8 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 614 ಭಾಗಶಃ ಬಿದ್ದಿವೆ. ಇನ್ನು ಕುಣಿಗಲ್ನಲ್ಲಿ ಓರ್ವ ಮೃತಪಟ್ಟಿದ್ದು, ಮೃತನ ಕುಟುಂಬಕ್ಕೆ ನಿಯಮಾನುಸಾರ 5ಲಕ್ಷ ರೂ., ಪರಿಹಾರ ನೀಡಲಾಗಿದೆ. ಗುಬ್ಬಿ, ಚಿಕ್ಕನಾಯಕನಹಳ್ಳಿ ಭಾಗದಲ್ಲಿನ ಬುಡಕಟ್ಟು ಜನಾಂಗದವರಿಗೆ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲಾಗಿದೆ. ಚಿಕ್ಕನಾಯಕನಹಳ್ಳಿಯ ಬುಡಕಟ್ಟು ಜನಾಂಗದವರಿಗೆ ಈಗಾಗಲೇ ನಿವೇಶನ ಹಕ್ಕು ಪತ್ರ ನೀಡಲಾಗಿದೆ.
    ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts