ಎಂ.ಕೆ. ಹುಬ್ಬಳ್ಳಿ: ಕಬ್ಬು ಪೂರೈಸಿದ ರೈತರಿಗೆ ಬಾಕಿ ಬಿಲ್ ಹಣ ಪಾವತಿಸದ ಎಲ್ಲ ಕಾರ್ಖಾನೆಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಸೆ. 7ರಂದು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಹೋರಾಟ ಆರಂಭಿಸುತ್ತಿದ್ದೇವೆ ಎಂದು ರೈತ ಸಂಘಟನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಗುರಣ್ಣವರ ಹೇಳಿದ್ದಾರೆ.
ಎಂ.ಕೆ. ಹುಬ್ಬಳ್ಳಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017-18ನೇ ಸಾಲಿನ ಕಬ್ಬಿನ ಬಾಕಿ ಬಿಲ್ 7.8 ಕೋಟಿ ರೂ., 2018-19 ಮತ್ತು 2019-20ನೇ ಸಾಲಿನ ಕಬ್ಬು ಕಟಾವು ಮತ್ತು ಸಾಗಣೆಯ ಒಟ್ಟು ಬಾಕಿ ಮೊತ್ತ 1.2 ಕೋಟಿ ರೂ. ಹಾಗೂ 2019-20ನೇ ಸಾಲಿನ ಹಂಗಾಮಿನ ಜನವರಿ ನಂತರ ಕಬ್ಬು ಪೂರೈಸಿದ ರೈತರ 13.5 ಕೋಟಿ ರೂ. ಪಾವತಿಸಬೇಕಿದೆ. ಹಾಗಾಗಿ ಸೆ. 7ರಿಂದ ಮಲಪ್ರಭಾ ಕಾರ್ಖಾನೆ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯ್ಕ, ಮುಖಂಡ ಚೂನಪ್ಪ ಪೂಜೇರಿ, ವೀರೇಶ ಮಂಡೇದ, ರವಿ ಪಾಟೀಲ, ಸಿಂಗಯ್ಯ ಪೂಜೇರ, ಗುರುಸಿದ್ಧಯ್ಯ ಪೂಜೇರ, ಮೌಲಾಲಿ ಮಕಾನದಾರ, ಆನಂದ ಹುಚ್ಚಗೌಡ್ರ, ಆನಂದ ಬೇವಿನ, ಅಬ್ದುಲ್ ಮುಲ್ಲಾ, ವೀರಭದ್ರ ತುರಮರಿ, ಪರಶುರಾಮ ಆರೇರ ಇತರರಿದ್ದರು.