ರಾಮನಗರ: ನಗರದ ಐಜೂರಿನ ಬಾಲಕಿಯರ ಬಾಲ ಮಂದಿರದಲ್ಲಿ ರಾತ್ರೋರಾತ್ರಿ ಏಳು ಬಾಲಕಿಯರು ಪರಾರಿಯಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲ ಮಂದಿರದಲ್ಲಿ ಮಂಗಳವಾರ ರಾತ್ರಿ 11.30ರ ಸುಮಾರಿಗೆ 15 ಅಡಿ ಗೋಡೆ ಹಾರಿ 8 ಬಾಲಕಿಯರು ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಪೈಕಿ ಓರ್ವ ಬಾಲಕಿ ಸಿಕ್ಕಿ ಬಿದ್ದಿದ್ದು, ಇವಳನ್ನು ವಿಚಾರಿಸಿದಾಗ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಕಂಡ ಕಂಡಲ್ಲಿ ಅಲೆದಾಡಿಸಿದ್ದಾಳೆ. ಸಿಕ್ಕಿ ಸಿಕ್ಕ ಜೋಪಡಿಗಳ ಬಳಿಗೆ ಕರೆದುಕೊಂಡು ಹೋಗಿ ಅಲ್ಲಿದ್ದರು, ಇಲ್ಲಿದ್ದರು ಎಂದು ತೋರಿಸಿದ್ದಾಳೆ. ಆದರೆ ತಪ್ಪಿಸಿಕೊಂಡ ಬಾಲಕಿಯರು ಅಧಿಕಾರಿಗಳಿಗೆ ಸಿಗಲೇ ಇಲ್ಲ.
ಇದನ್ನೂ ಓದಿರಿ ಮಾರುಕಟ್ಟೆಗೆ ಬರಲಿದೆ ಆಯುರ್ವೇದಿಕ್ ಮಾಸ್ಕ್ !
ಚನ್ನಪಟ್ಟಣ ಬಳಿಯ ವಂದಾರಗುಪ್ಪೆ ಬಾಲಮಂದಿರ ಬಾಲಕಿಯರಿಗೆ ಸುರಕ್ಷಿತವಲ್ಲ ಎನ್ನುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ರಾಮನಗರದ ಐಜೂರಿನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಈ ಕಟ್ಟಡದಿಂದಲೂ ಬಾಲಕಿಯರು ಪರಾರಿ ಆಗಿದ್ದಾರೆ.
ಕಟ್ಟಡದ ಒಳಭಾಗದ ಸುಮಾರು 15 ಅಡಿ ಎತ್ತರದ ಗೋಡೆಯನ್ನು ಹಾರಿ ಮುಖ್ಯದ್ವಾರಕ್ಕೆ ಬಂದಿರುವ ಬಾಲಕಿಯರು, ನಂತರ ಗೇಟ್ನಿಂದ ಹೊರ ಬಂದಿದ್ದಾರೆ. ಬಾಲಕಿಯರು ಗೇಟ್ ಹಾರಿ ಓಡಿಹೋಗಿರುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟ್ಟಡಕ್ಕೆ ಹೊಂದಿಕೊಂಡಂತೆ ದೊಡ್ಡ ಕಲ್ಲಿನ ಗುಡ್ಡವೊಂದಿದ್ದು ಈ ಮೂಲಕ ಬಾಲಕಿಯರು ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ. ನಾಪತ್ತೆಯಾದ ಬಾಲಕಿಯರು ಚಿಂದಿ ಆಯುತ್ತಿದ್ದರು ಎನ್ನಲಾಗಿದ್ದು, ಇವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿರಿ ಕೋವಿಡ್ ಸೋಂಕಿತ ಪವಾಡ ಪುರುಷ ಹಾಲಸ್ವಾಮೀಜಿ ನಿಧನ
ವಂದಾರಗುಪ್ಪೆ ಬಳಿಯ ಬಾಲ ಮಂದಿರದಿಂದ ಇಬ್ಬರು ಬಾಲಕಿಯರು ಪರಾರಿಯಾಗಿದ್ದ ಘಟನೆ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿತ್ತು. ನಂತರ ಈ ಇಬ್ಬರೂ ಸಿಕ್ಕಿದ್ದರು. ಇದೀಗ 7 ಬಾಲಕಿಯರು ನಾಪತ್ತೆಯಾಗಿದ್ದು, ಮತ್ತೆ ತಲೆನೋವು ತಂದೊಡ್ಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಎ.ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
7 ಬಾಲಕಿಯರು ನಾಪತ್ತೆಯಾಗಿದ್ದು, ಘಟನೆಗೆ ಕಾರಣ ಏನೆಂದು ಗೊತ್ತಿಲ್ಲ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ (ಪ್ರಭಾರ) ಸಿ.ವಿ.ರಾಮನ್ ತಿಳಿಸಿದ್ದಾರೆ.