ಬೆಂಗಳೂರು: ಸ್ವಾವಲಂಬಿಗಳಾಗುವ ಮೂಲಕ ರಾಜ್ಯದಲ್ಲಿ ಆರ್ಥಿಕ ಕ್ರಾಂತಿಗೆ ಮಹಿಳೆಯರು ಮುನ್ನುಡಿ ಬರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ವಿಶೇಷವಾದ ಸ್ಥಾನಮಾನವಿದೆ. ಮಹಿಳೆ ಶಕ್ತಿಯ ಪ್ರತೀಕ. ಆಕೆಯಿಂದಲೇ ಈ ಜಗತ್ತು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ದೇಶ ಪ್ರಗತಿಯಾಗುತ್ತದೆ. ಭಾರತ ದೇಶ ಉಳಿತಾಯಮುಖಿ ಆರ್ಥಿಕತೆ ಹೊಂದಿದೆ. ಖರ್ಚುಗಳನ್ನು ಕಡಿಮೆ ಮಾಡಿ ಆಪತ್ಕಾಲಕ್ಕೆ ಹಣವನ್ನು ಉಳಿತಾಯ ಮಾಡುವ ಸಂಸ್ಕೃತಿ ನಮ್ಮ ಮಹಿಳೆಯರಲ್ಲಿದೆ. ಅವರಿಂದ ಮುಂದೆ ದೇಶದಲ್ಲಿ ದೊಡ್ಡ ಆರ್ಥಿಕ ಬದಲಾವಣೆ ಆಗಲಿದೆ ಎಂದ ವಿಶ್ವಾಶ ವ್ಯಕ್ತಪಡಿಸಿದರು.
ಉಳಿತಾಯ ಸಂಸ್ಕೃತಿ ಅಡುಗೆ ಮನೆಯಲ್ಲಿದೆ: ಮುಂದುವರಿದ ದೇಶಗಳ ಬ್ಯಾಂಕುಗಳಿಗೆ ಹೋಲಿಸಿದರೆ, ಭಾರತ ದೇಶದಲ್ಲಿ ಉಳಿತಾಯ ಸಂಸ್ಕೃತಿ ಆರಂಭವಾಗುವುದು ಅಡುಗೆ ಮನೆಯಲ್ಲಿ. ಮಹಿಳೆಯರು ಚಿಲ್ಲರೆ ಹಣವನ್ನು ಸಾಸಿವೆ, ಜೀರಿಗೆ ಡಬ್ಬಿಯಲ್ಲಿ ಇಡುವ ಸಂಸ್ಕೃತಿಯನ್ನು ಅನುಸರಿಸಿಸುವ ಮೂಲಕ ಉಳಿತಾಯ ಸಂಸ್ಕೃತಿಯನ್ನು ಬೆಳೆಸಿದವರು. ಇದು ದೊಡ್ಡ ದೊಡ್ಡ ಬ್ಯಾಂಕುಗಳಿಗಿಂತ ಸದೃಢವಾದದ್ದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಲೆ, ಕ್ರೀಡೆ, ಶಿಕ್ಷಣ, ಸಾಹಿತ್ಯ, ವೀರಮಹಿಳೆ ಸೇರಿ ಮಹಿಳಾ ಅಭಿವೃದ್ಧಿಗಾಗಿ ಶ್ರಮಿಸಿದ ವಿವಿಧ ಕ್ಷೇತ್ರಗಳ 20 ಸಾಧಕ ಮಹಿಳೆಯರು ಹಾಗೂ 6 ಸಂಸ್ಥೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಜತೆಗೆ ರಾಜ್ಯಮಟ್ಟದ ಅತ್ಯುತ್ತಮ ಸ್ತ್ರೀ ಶಕ್ತಿ ಗುಂಪುಗಳಿಗೆ, ಮಕ್ಕಳ ಕ್ಷೇತ್ರದ ಪ್ರಶಸ್ತಿಗಳನ್ನು ಹಾಗೂ ಅಸಾಧಾರಣ ಸಾಧನೆಗಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ – 22 ನೀಡಿ ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ತಮ್ಮಣಗೌಡ ಪಾಟೀಲ, ಅರುಣ್ ಷಹಾಪೂರ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ಆರ್. ನಾಯ್ಡು ಮೊದಲಾದವರು ಉಪಸ್ಥಿತರಿದ್ದರು.
ಮಹಿಳೆಗೆ ಸಮಾನ ಅವಕಾಶ: ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗಾಗಿಯೇ ಸರ್ಕಾರ 43,118 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಗುಡಿಕೈಗಾರಿಕೆಯಿಂದ ಸ್ಟಾರ್ಟ್ ಅಪ್ವರೆಗೂ ಸಮಾನ ಅವಕಾಶ ನೀಡಲಾಗುವುದು. ಸ್ವಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳಿಗೆ ಬ್ರಾಂಡಿಂಗ್ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಅಮೆಜಾನ್ ಸಂಸ್ಥೆಯೊಂದಿಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಜತೆಗೆ ಮಹಿಳೆ ಮತ್ತು ಮಕ್ಕಳ ಆರೋಗ್ಯಕ್ಕೆ ವಿಶೇಷ ಗಮನ ಹರಿಸಲಾಗಿದೆ ಎಂದು ಹೇಳಿದರು.
ವ್ಯಕ್ತಿ ಪ್ರಶಸ್ತಿ
- ಚಂದ್ರಕಲಾ, ತುಮಕೂರು
- ಮಂಗಳಾ ನಾಗರಾಜ, ಬೆಂಗಳೂರು
- ಜಯಮ್ಮ, ಮಂಡ್ಯ
- ಶೈಲಜಾ, ದಕ್ಷಿಣ ಕನ್ನಡ
- ಶಿವಮ್ಮ ಸಾಲಿ, ಹಾಸನ
- ಪ್ರಿಯಾ ಚ ಖೋದಾನಪೂರ, ಧಾರವಾಡ
- ಗಂಗೂಬಾಯಿ ವಿ.ರಜಪೂತ, ಬಾಗಲಕೋಟೆ
- ದುರುಗಮ್ಮ, ಬಳ್ಳಾರಿ
ಕಲಾ ಪ್ರಶಸ್ತಿ
- ಮೇಘ ಸಾಲಿಗ್ರಾಮ, ಉಡುಪಿ
- ವಿದೂಷಿ ಶೃತಿ ಕಟ್ಟಿ, ಹುಬ್ಬಳ್ಳಿ
- ಜ್ಯೋತಿ ವಾದಿರಾಜ್ ಗಲಿಗಲಿ, ಧಾರವಾಡ
- ವಿದೂಷಿ ಪುಷ್ಪ ಕೃಷ್ಣ ಮೂರ್ತಿ, ಶಿವಮೊಗ್ಗ
- ಎ.ಎಸ್.ಆರತಿ ಸುರೇಶ್, ಬೆಂಗಳೂರು
ಸಂಸ್ಥೆಗಳಿಗೆ ಪ್ರಶಸ್ತಿ
- ರತ್ನಮಾಲ ಮಹಿಳಾ ಮಂಡಳಿ, ಕೋಲಾರ
- ದ ಕೂರ್ಗ್ ಫೌಂಡೇಶನ್, ಕೊಡಗು
- ರಚಿತಾ ಮಹಿಳಾ ಸಮಾಜ, ಚಿಕ್ಕಮಗಳೂರು
- ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ, ಧಾರವಾಡ
- ಶಾರದಾಂಬೆ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಧಾರವಾಡ
- ಮಾತೃ ಮಹಿಳಾ ಮಂಡಳಿ, ಬಳ್ಳಾರಿ
ಸಾಹಿತ್ಯ ಪ್ರಶಸ್ತಿ
- ಉಳುವಂಗಡಿ ಕಾವೇರಿ ಉದಯ, ಕೊಡಗು
- ಸುಲಕ್ಷಣಾ ಶಿಪೂರ, ಹಾವೇರಿ
- ಶಾರದಾ ಕೃಷ್ಣಮೂರ್ತಿ, ಉತ್ತರ ಕನ್ನಡ
ವೀರಮಹಿಳೆ ಪ್ರಶಸ್ತಿ
- ಮಲಚೀರ ಯಶೋಧ ದೇವಯ್ಯ, ಕೊಡಗು
ಕ್ರೀಡಾ ಪ್ರಶಸ್ತಿ
- ಎಂ. ಅನಿತಾ, ಚಿತ್ರದುರ್ಗ,
- ಎನ್. ಚೈತ್ರಶ್ರೀ, ಬೆಂಗಳೂರು
ಸ್ತ್ರಿ ಗುಂಪು
- ವಿನಾಯಕ ಸ್ತ್ರಿ ಶಕ್ತಿ ಗುಂಪು, ಸೋಮವಾರ ಪೇಟೆ
- ಧನಲಕ್ಷ್ಮೀ ಸ್ತ್ರಿ ಶಕ್ತಿ ಗುಂಪು, ಬಂಟ್ವಾಳ
- ನಂದಿನಿ ಆದರ್ಶ, ಸ್ತ್ರಿ ಶಕ್ತಿ ಗುಂಪು, ಹಿರಿಯೂರು
ಮಕ್ಕಳ ವಿಭಾಗ
- ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ, ಕುಮಾರಿ ಶಶಿಕಲಾ ಬ. ಪಾಟೀಲ, ಬೆಳಗಾವಿ
- ಹೊಯ್ಸಳ ಶೌರ್ಯ ಪ್ರಶಸ್ತಿ, ಮಾಸ್ಟರ್ ಕೆ.ಆರ್. ದೀಕ್ಷಿತ್, ಕೊಡಗು
ಶಿಕ್ಷಣ ಪ್ರಶಸ್ತಿ
- ನವೋದಯಾ ತರಬೇತಿ ಕೇಂದ್ರದ ಎಚ್.ಆರ್.ಕನ್ನಿಕ, ಮಂಡ್ಯ
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ
- ಸಯ್ಯದ್ ಫತೀನ್ ಅಹಮದ್, ಬೆಂಗಳೂರು
- ರೆಮೋನ ಇವೆಟ್ ಪಿರೇರಾ, ಮಂಗಳೂರು
ಇನ್ನೊಬ್ಬ ಅಧಿಕಾರಿಯ ಲಂಚದ ಹಣ ಮನೇಲಿಟ್ಟುಕೊಂಡು ಸಿಕ್ಕಿಬಿದ್ದ ಅಧಿಕಾರಿ!