ಚನ್ನಮ್ಮ ಕಿತ್ತೂರು: ಕ್ಷೇತ್ರದಲ್ಲಿ 430 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದ್ದಾರೆ. ಇಲ್ಲಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸೋಮವಾರ ರಾಜ್ಯ ಸರ್ಕಾರ ಒಂದು ವರ್ಷದ ಆಡಳಿತ ಯಶಸ್ವಿಯಾಗಿ ಪೂರೈಸಿದ ಅಂಗವಾಗಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಹಾಗೂ ಕ್ಷೇತ್ರದ ಜನರ ನಡುವೆ ಸಂಪರ್ಕ ಕೊಂಡಿ ನಾನಾಗಿದ್ದೇನೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಅತಿವೃಷ್ಟಿ-ಅನಾವೃಷ್ಟಿ ಹಾಗೂ ಕರೊನಾದಂಥ ಸಂದಿಗ್ಧ ಸ್ಥಿತಿ ಎದುರಾದರೂ ಅವರು ಜಾಣ್ಮೆಯಿಂದ ಎದುರಿಸಿದರು. ಕೆರೆ ತುಂಬಿಸುವ ಯೋಜನೆಗೆ ಸರ್ಕಾರ 249 ಕೋಟಿ ರೂ.ಅನುದಾನ ನೀಡಿದ್ದು, ಕೆಲಸ ಪ್ರಾರಂಭವಾಗಿದೆ. ಅಲ್ಲದೆ ಕಿತ್ತೂರು ಪ್ರಾಧಿಕಾರಕ್ಕೆ ಸದಸ್ಯರು ನೇಮಕ ಮಾಡಿದ್ದು 50 ಕೋಟಿ ರೂ. ಗಳನ್ನು ಮುಖ್ಯಮಂತ್ರಿ ಮಂಜೂರು ಮಾಡಲಿದ್ದಾರೆ ಎಂದು ತಿಳಿಸಿದರು. ಚಚಡಿ ಏತ ನೀರಾವರೆ ಯೋಜನೆ ಹಾಗೂ ಮಾರ್ಕಂಡೇಯ ನದಿ ನೀರು ಹಂಚುವಲ್ಲಿ ವಿಶೇಷ ಆದ್ಯತೆ ನೀಡಿದ್ದು, ಯೋಜನೆಗಳಿಗೆ ಮಂಜೂರಾತಿ ದೊರಕಲಿದೆ. ಚನ್ನಮ್ಮ ರಾಣಿ ಸ್ಮಾರಕ ಭವನ ನಿರ್ಮಾಣಕ್ಕೆ ಕಲ್ಮಠದ ರಾಜಗುರು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ 2 ಎಕರೆ ಜಮೀನು ನೀಡಿದ್ದು ಶ್ಲಾಘನೀಯ. ಆ ಸ್ಥಳದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದರು. ಬಿಜೆಪಿ ಬ್ಲಾಕ್ ಅಧ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿ, ಕಿತ್ತೂರಲ್ಲಿ ಸುವರ್ಣ ಸೌಧ ಉದ್ಘಾಟನೆ ಶೀಘ್ರ ನಡೆಯಲಿದೆ ಎಂದರು. ಸಂದೀಪ ದೇಶಪಾಂಡೆ, ಬಸವರಾಜ ಕೊಳದೂರ, ಅಪ್ಪಣ್ಣ ಪಾಗಾದ, ಬಸನಗೌಡ ಸಿದ್ರಾಮಣಿ, ಉಳವಪ್ಪ ಉಳ್ಳಾಗಡ್ಡಿ , ಚಿನ್ನಪ್ಪ ಮುತ್ನಾಳ, ಈರಣ್ಣ ವಾರದ, ಸರಸ್ವತಿ ಹೈಬತ್ತಿ ಇತರರಿದ್ದರು.
ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 1 ಕೋಟಿಗೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿದೆ. ಬೂತ್ಮಟ್ಟದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿ ಬೂತ್ಗೆ 5 ಸಸಿ ನೆಡಲಾಗುವುದು.
| ಮಹಾಂತೇಶ ದೊಡಗೌಡರ ಶಾಸಕ