ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕಿಲೂರಾ ಗ್ರಾಮದಲ್ಲಿ ರಕ್ಷಣಾ ಪಡೆ ಯೋಧರು ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿಸಿದ್ದು, ಎನ್ಕೌಂಟರ್ನಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಮತ್ತೋರ್ವ ಉಗ್ರ ರಕ್ಷಣಾ ಪಡೆಗೆ ಶರಣಾಗತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರದ ಐಜಿ ಪೊಲೀಸ್ ವಿಜಯಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂದಿನ ಎನ್ಕೌಂಟರ್ನಲ್ಲಿ ಶಕೂರ್ ಪಾರ್ರೇ ಅಲ್ ಬದ್ರ್ ಎಂಬ ಜಿಲ್ಲಾ ಕಮಾಂಡರ್, ಮತ್ತೋರ್ವ ಉಗ್ರ ಸುಹೈಲ್ ಭಟ್ ಹತರಾಗಿದ್ದಾರೆ. ಸುಹೈಲ್ ಎಂಬಾಂತ ಕನ್ಮೋಹ್ನ ಸರಪಂಚ್ನನ್ನು ಅಪಹರಿಸಿ ಹತ್ಯೆಗೈದ ಪ್ರಕರಣದಲ್ಲಿ ಬೇಕಾದವನಾಗಿದ್ದ. ಒಟ್ಟು ನಾಲ್ವರು ಉಗ್ರರು ಹತರಾಗಿದ್ದು ಇನ್ನೋರ್ವ ಉಗ್ರ ಶರಣಾಗಿದ್ದಾನೆ. ಸ್ಥಳದಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನೀಟ್, ಜೆಇಇ ನಡೆಸಲು ಬೆಂಬಲ ಸೂಚಿಸಿದ ಉತ್ತರ ಪ್ರದೇಶ
ಇದಕ್ಕೂ ಮುನ್ನ, ಶುಕ್ರವಾರ ಬೆಳಗ್ಗೆ ಅಪಹರಣಕ್ಕೆ ಒಳಗಾಗಿದ್ದ ಸರಪಂಚ್ ನಿಸಾರ್ ಅಹ್ಮದ್ ಭಟ್ ಅವರ ಮೃತದೇಹ ಶೋಪಿಯಾನ್ನಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಭಟ್ ಆಗಸ್ಟ್ 19ರಂದು ನಾಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆಡಿಯೋ ಟೇಪ್ ಒಂದು ವೈರಲ್ ಆಗಿತ್ತು. ಅದರಲ್ಲಿ ಉಗ್ರರಿಂದ ಅಪಹರಣಕ್ಕೆ ಒಳಗಾಗಿ ಭಟ್ ಕೊಲ್ಲಲ್ಪಟ್ಟ ಮಾಹಿತಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)