ಮುಂಬೈ : ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್ ದೇಶ್ಮುಖ್ ವಿರುದ್ಧ ಮನಿ ಲಾಂಡಂರಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಫೋರ್ಸ್ಮೆಂಟ್ ಡೈರೆಕ್ಟೊರೇಟ್(ಇಡಿ), ಇಂದು 11 ಗಂಟೆಗೆ ದೇಶ್ಮುಖ್ ಅವರನ್ನು ವಿಚಾರಣೆಗೆ ಕರೆಸಿದೆ. ನಿನ್ನೆಯ ದಿನ ದೇಶ್ಮುಖ್ರ ವಿವಿಧ ನಿವಾಸಗಳಿಗೆ ತೆರಳಿ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳಿಗೆ 12 ಬಾರ್ ಮಾಲೀಕರಿಂದ 4 ಕೋಟಿ ರೂ.ಗಳನ್ನು ಪಡೆದಿರುವ ಬಗ್ಗೆ ಸುಳಿವು ಸಿಕ್ಕಿದೆ ಎನ್ನಲಾಗಿದೆ.
ನಿನ್ನೆ ದೇಶ್ಮುಖ್ ಅವರ ಪಿಎ ಕುಂದನ್ ಶಿಂದೆ ಮತ್ತು ಪಿಎಸ್ ಸಂಜೀವ್ ಪಾಲಂಡೆ ಅವರನ್ನು 9 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು, ಬಂಧನಕ್ಕೊಳಪಡಿಸಿದ್ದಾರೆ. ಪ್ರಿವೆಂಷನ್ ಆಫ್ ಮನಿ ಲಾಂಡಂರಿಂಗ್ ಆ್ಯಕ್ಟ್(ಪಿಎಂಎಲ್ಎ)ನ ಅಡಿಯಲ್ಲಿ ಬಂಧಿಸಲಾಗಿರುವ ಇವರನ್ನು ಇಂದು ವಿಶೇಷ ಪಿಎಂಎಲ್ಎ ಕೋರ್ಟ್ನ ಮುಂದೆ ಹಾಜರುಪಡಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ: ಮತ್ತೆ ಮೂವರ ಬಂಧನ, ಹತ್ಯೆ ವೇಳೆ ಒಬ್ಬೊಬ್ಬರೂ ಒಂದೊಂದು ಕೃತ್ಯವೆಸಗಿದ್ದರು…
ದೇಶ್ಮುಖ್ ಅವರ ನಾಗ್ಪುರ ಮನೆ ಮತ್ತು ಮುಂಬೈನ ವೊರ್ಲಿ ಮತ್ತು ಮಲಾಬಾರ್ ಹಿಲ್ಗಳಲ್ಲಿರುವ ಎರಡು ಮನೆಗಳಿಗೆ ಇಡಿ ಅಧಿಕಾರಿಗಳು ಹೋಗಿ ತನಿಖೆ ನಡೆಸಿದ್ದಾರೆ. ಶಿಂದೆ ಮತ್ತು ಪಾಲಂಡೆ ಅವರ ಮನೆಗಳಿಗೂ ತೆರಳಿ ರೇಡ್ ನಡೆಸಿದ ನಂತರ ಇಬ್ಬರನ್ನೂ ದಕ್ಷಿಣ ಮುಂಬೈನಲ್ಲಿರುವ ಇಡಿ ಕಛೇರಿಗೆ ವಿಚಾರಣೆಗೆ ಕರೆತಂದು, ಆನಂತರ ಅವರನ್ನು ಬಂಧನಕ್ಕೊಳಪಡಿಸಲಾಯಿತು ಎನ್ನಲಾಗಿದೆ.
ಮಾಜಿ ಸಹಾಯಕ ಇನ್ಸ್ಪೆಕ್ಟರ್ ಸಚಿನ್ ವಾಜ್ 12 ಬಾರ್ಗಳ ಮಾಲೀಕರಿಂದ ಸುಮಾರು 4 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದರು. ಈ ಹಣವನ್ನು ದೇಶ್ಮುಖ್ರ ಹತ್ತಿರದ ಸಂಬಂಧಿಗೆ ಸೇರಿದ ಮಹಾರಾಷ್ಟ್ರದ ಹೊರಗಿನ ಶೆಲ್ ಕಂಪನಿಗಳ ಮೂಲಕ ದೇಶ್ಮುಖ್ ಅವರಿಗೆ ವರ್ಗಾಯಿಸಲಾಗಿತ್ತು ಎಂಬುದು ತಿಳಿದುಬಂದಿದೆ. ದೇಶ್ಮುಖ್ ಅವರನ್ನು ಬಂಧನಕ್ಕೊಳಪಡಿಸಲು ಸಾಕಷ್ಟು ಸಾಕ್ಷ್ಯಗಳು ಸಂಗ್ರಹವಾಗಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಮಾಸ್ಕ್ ವಿವಾದ : ಗ್ರಾಹಕನ ಮೇಲೆ ಗುಂಡು ಹಾರಿಸಿದ ಸೆಕ್ಯುರಿಟಿ ಗಾರ್ಡ್!