ಬೆಂಗಳೂರು: ದೇಶ-ವಿದೇಶಗಳಿಂದ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಬೇಲೂರು, ಹಂಪಿ, ಬಾದಾಮಿ ಹಾಗೂ ವಿಜಯಪುರದಲ್ಲಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಮೆ. ರೈಟ್ಸ್ ಸಂಸ್ಥೆ ಅಧಿಕಾರಿಗಳು ಹಾಗೂ ಕೆ.ಎಸ್.ಟಿ.ಡಿ.ಸಿ. ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ ತಿಂಗಳು ಶಂಕುಸ್ಥಾಪನೆ: ಈ ಸಂಧರ್ಭದಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮೆ. ರೈಟ್ಸ್ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ತಿಂಗಳು ನಾಲ್ಕು ಹೋಟೆಲ್ಗಳಿಗೆ ಶಂಕುಸ್ಥಾಪನೆ ಮಾಡಿ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.
ಹಂಪಿಯಲ್ಲಿ 100 ಕೊಠಡಿ ಹೋಟೆಲ್: ವಿಜಯಪುರ 57, ಬಾದಾಮಿ 72, ಹಂಪಿ 100 ಹಾಗೂ ಬೇಲೂರಿನಲ್ಲಿ 75 ಕೊಠಡಿಗಳ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುವುದು. 83.97 ಕೋಟಿ ರೂ. ವೆಚ್ಚ: ಬೇಲೂರು 20.71 ಕೋಟಿ ರೂ., ಬಾದಾಮಿ 18.32 ಕೋಟಿ, ವಿಜಯಪುರ 16.74 ಕೋಟಿ, ಹಾಗೂ ಹಂಪಿಯಲ್ಲಿ 28.20 ಕೋಟಿ ರೂ. ಸೇರಿದಂತೆ ಒಟ್ಟು 83.97 ಕೋಟಿ ರೂ. ವೆಚ್ಚದಲ್ಲಿ 4 ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲಾಗುವುದು ಎಂದರು.
ಹಂಪಿ, ಬೇಲೂರು, ಬಾದಾಮಿ ಹಾಗೂ ವಿಜಯಪುರಗಳಲ್ಲಿ ಪ್ರವಾಸಿಗರಿಗೆ ತಂಗಲು ಹೋಟೆಲ್ ಗಳು ಇರಲಿಲ್ಲ. ಹಾಗಾಗಿ ವಿಶ್ವವಿಖ್ಯಾತ ಪ್ರವಾಸಿ ತಾಣಗಳಲ್ಲಿ ಹೋಟೆಲ್ ನಿರ್ಮಿಸುವುದಾಗಿ ತಿಳಿಸಿದರು.
ಸುಸಜ್ಜಿತ ಹೋಟೆಲ್ ನಿರ್ಮಾಣ: ಹಂಪಿಯಲ್ಲಿ 9.5 ಎಕರೆ ಪ್ರದೇಶದಲ್ಲಿ ಬೇಲೂರಿನಲ್ಲಿ ಯಗಚಿ ಅಣೆಕಟ್ಟಿನ ಸಮೀಪ 6 ಎಕರೆ ಪ್ರದೇಶದಲ್ಲಿ ಬಾದಾಮಿಯಲ್ಲಿ ಬನಶಂಕರಿ ದೇವಾಲಯದ ಸಮೀಪ ಹಾಗೂ ವಿಜಯಪುರದಲ್ಲಿ 10 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಹೋಟೆಲ್ ನಿರ್ಮಾಣ ಮಾಡುವುದಾಗಿ ವಿವರಿಸಿದರು.
ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿ ಆಗಬಾರದು. ಸುಂದರವಾದ ವಿನ್ಯಾಸದೊಂದಿಗೆ ನಿಗದಿಪಡಿಸಿದ ಸಮಯದಲ್ಲಿ ಹೋಟೆಲ್ಗಳನ್ನು ನಿರ್ಮಾಣ ಮಾಡುವಂತೆ ಮೆ. ರೈಟ್ಸ್ ಕಂಪನಿಗೆ ಸಚಿವ ಯೋಗೇಶ್ವರ್ ಸೂಚಿಸಿದರು.
ಚುನಾವಣಾ ಸಮಾವೇಶದಲ್ಲಿ ಗಾಯಗೊಂಡ ಮಮತಾ ಬ್ಯಾನರ್ಜಿ: ನನ್ನ ಮೇಲೆ ಸಂಚು ನಡೆದಿದೆ ಎಂದ ದೀದಿ