ಸಿಂದಗಿ: ಸ್ಥಳೀಯ ಭೀಮಾಶಂಕರ ಮಠದ ಪೀಠ ಪರಂಪರೆಯಂತೆ ದತ್ತಪ್ಪಯ್ಯ ಸ್ವಾಮಿಗಳು ಮಂಗಳವಾರ ರಾತ್ರಿ ಬಿಂದಿಗೆ ಮಹಾತ್ಮೆ ಹಿನ್ನಲೆಯಲ್ಲಿ ಗುರುವಾಗಿ ಶಿಷ್ಯವರ್ಗದ ವೈದಿಕ ಬ್ರಾಹ್ಮಣರ ಪಾದಪೂಜೆ ನೆರವೇರಿಸಿದರು.
ಭೀಮಾಶಂಕರ ಸ್ವಾಮಿಗಳ 391ನೇ ಆರಾಧನೆ ಮಹೋತ್ಸವದ ಮೂರನೇ ದಿನದ ಪ್ರಮುಖ ಘಟ್ಟವಾದ ಬಿಂದಿಗೆ ಮಹಾತ್ಮೆ ನಿಮಿತ್ತ ಸಂಜೆ ಮೂಲ ಬಿಂದಿಗೆಯನ್ನು ಮೆರವಣಿಗೆ ಮೂಲಕ ಮಠಕ್ಕೆ ತರಲಾಯಿತು. ನಂತರ ಬಿಂದಿಗೆ ಪವಾಡದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಬಳಿಕ ಪೀಠಾಧಿಪತಿ ದತ್ತಪ್ಪಯ್ಯ ಸ್ವಾಮಿಗಳು ಪೀಠ ಪರಂಪರೆಯ ಮೂಲ ಪುರುಷರ ಸ್ಮರಣೆಯೊಂದಿಗೆ ಮಠದಲ್ಲಿನ ಕೋಣೆಗೆ ತೆರಳಿ ಬಿಂದಿಗೆ ಮಹಾತ್ಮೆಯ ಸಫಲತಾ ಕಾರ್ಯದ ಸಂಕಲ್ಪಕ್ಕೆ ಆಶೀರ್ವಾದ ಪಡೆದು, ಭೀಮಾಶಂಕರ ಯತಿವರ್ಯರ ಕೃಪೆಗಾಗಿ ಪೂಜೆ ಸಲ್ಲಿಸಿದರು.
ದತ್ತಪ್ಪಯ್ಯ ಸ್ವಾಮಿಗಳು, ಜಗನ್ನಾಥಭಟ್ಟ ಜೋಶಿ, ವಿಜಯ ಕುಲಕರ್ಣಿ, ಶ್ರೀಹರಿ ಜೋಶಿ, ಅಕ್ಷಯ ಕುಲಕರ್ಣಿ ಇತರರಿದ್ದರು.