ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಆರಂಭವಾದ ಒಂದೇ ವಾರದಲ್ಲಿ ಸಾರಿಗೆ ನಿಗಮಗಳ 36 ಬಸ್ಗಳಿಗೆ ಹಾನಿಯಾಗಿದೆ. ಮುಷ್ಕರನಿರತ ಸಿಬ್ಬಂದಿಯ ಆಕ್ರೋಶಕ್ಕೆ ಲಕ್ಸುರಿ ಬಸ್ಗಳೂ ಲಗಾಡಿಯಾಗಿವೆ. ಈ ಮೂಲಕ ಅಂಬಾರಿಯ ಕನಸೂ ಚೂರುಚೂರಾದಂತಾಗಿದೆ.
ಸಾರಿಗೆ ನೌಕರರ ಮುಷ್ಕರ ಆರಂಭವಾಗುತ್ತಿದ್ದಂತೆ ನೌಕರರ ವಲಯದಲ್ಲೇ ಎರಡು ವಿಭಾಗವಾಗಿದ್ದು, ಒಂದು ವರ್ಗದವರು ಮುಷ್ಕರ ನಡೆಸಿದರೆ, ಇನ್ನೊಂದು ವರ್ಗದವರು ಬೀದಿಗಳಿದು ಬಸ್ ತಡೆಯುವ ಮೂಲಕ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಹೀಗೆ ತಮ್ಮ ಮುಷ್ಕರಕ್ಕೆ ವಿರುದ್ಧವಾಗಿ ಕೆಲವು ಸಹೋದ್ಯೋಗಿಗಳು ಬಸ್ಗಳನ್ನು ರಸ್ತೆಗಿಳಿಸಿದ್ದರ ಬಗ್ಗೆ ಮುಷ್ಕರನಿರತರು ಆಕ್ರೋಶ ವ್ಯಕ್ತಪಡಿಸಿ ಕಲ್ಲು ತೂರಾಟ ಇತ್ಯಾದಿ ನಡೆಸಿದ್ದರಿಂದಾಗಿ ಸರ್ಕಾರಿ ಬಸ್ಗಳು ಹಾನಿಗೀಡಾಗಿವೆ.
ಐಷಾರಾಮಿ ಬಸ್ಗಳನ್ನೂ ಲೆಕ್ಕಿಸದೆ ಕಲ್ಲು ತೂರಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬಸ್ಗಳು ಜಖಂಗೊಂಡಿವೆ. ಅದರಲ್ಲೂ ‘ಅಂಬಾರಿ ಡ್ರೀಮ್ ಕ್ಲಾಸ್- ಟ್ರಾವೆಲ್ ವಿದ್ ಡ್ರೀಮ್ಸ್’ ಎಂದು ಬರೆದಿರುವ ಲಕ್ಸುರಿ ಬಸ್ಗೂ ಕಲ್ಲು ಬಿದ್ದಿದ್ದು, ಅದರ ದುಬಾರಿ ಗ್ಲಾಸ್ಗಳು ಹಾನಿಗೊಂಡು ಅಂಬಾರಿಯ ಕನಸೂ ಚೂರುಚೂರಾದಂತಾಗಿದೆ. ಹೀಗೆ ರಾಜ್ಯದ ನಾಲ್ಕು ನಿಗಮಗಳಲ್ಲಿ ಏ. 7ರಿಂದ 13ರ ಅವಧಿಯಲ್ಲಿ ಸರ್ಕಾರದ ಒಟ್ಟು 36 ಬಸ್ಗಳು ಹಾನಿಗೀಡಾಗಿವೆ. ಈ ಸಂಬಂಧ 115 ಸಿಬ್ಬಂದಿ ವಿರುದ್ಧ ಒಟ್ಟು 72 ಪ್ರಕರಣಗಳು ದಾಖಲಾಗಿದ್ದು, 19 ಮಂದಿಯನ್ನು ಬಂಧಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.