ಲಖನೌ: ನಾಗರಿಕ ಸಮಾಜ ತಲೆತಗ್ಗಿಸುವಂತಹ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಲೈಂಗಿಕ ಕಿರುಕುಳ ವಿರೋಧಿಸಿದ 16 ವರ್ಷದ ಹುಡುಗಿಗೆ ಮೂವರು ದುರುಳರು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಶುಕ್ರವಾರ ಸಂಜೆ ಫೈರೋಜಾಬಾದ್ ಜಿಲ್ಲೆಯ ಸಂತ್ರಸ್ತೆಯ ನಿವಾಸದಲ್ಲಿ ನಡೆದಿದೆ.
ಸಂತ್ರಸ್ತೆಯ ತಂದೆ ನೀಡಿರುವ ದೂರಿನ ಅನ್ವಯ ಮೂವರು ಆರೋಪಿಗಳ ಪತ್ತೆಗೆ ಬಲೆ ಬೀಸಿರುವುದಾಗಿ ಉ.ಪ್ರ ಪೊಲೀಸರು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆಯ ಶವವನ್ನು ಜಿಲ್ಲಾಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಲಾಗಿದೆ.
ಇದನ್ನೂ ಓದಿ: ಬಿಹಾರ ಹೊರತುಪಡಿಸಿ ಉಳಿದ ರಾಜ್ಯಗಳೆಲ್ಲ ಪಾಕಿಸ್ತಾನವಲ್ಲ: ಬಿಜೆಪಿ ವಿರುದ್ಧ ಶಿವಸೇನಾ ವಾಗ್ದಾಳಿ!
ಶುಕ್ರವಾರ ಸಂಜೆ ಫೈರೋಜಾಬಾದ್ನ ಪ್ರೇಮ್ ನಗರದಲ್ಲಿರುವ ಸಂತ್ರಸ್ತೆಯ ನಿವಾಸಕ್ಕೆ ಆರೋಪಿಗಳು ನುಗ್ಗಿದ್ದಾರೆ. ಆಗ ತಾನೇ ಸಂತ್ರಸ್ತೆ ಕಾಲೇಜಿನಿಂದ ಮನೆ ಬಂದಿದ್ದಳು. ಅವಳೊಂದಿಗೆ ವಾಗ್ವಾದಕ್ಕೆ ಇಳಿದ ಆರೋಪಿಗಳು ಕೆಟ್ಟ ಪದಗಳಿಂದ ನಿಂದಿಸಿದರು. ಅಲ್ಲದೆ, ಅತ್ಯಾಚಾರಕ್ಕೆ ಮುಂದಾದಾಗ ಮಗಳು ಅದಕ್ಕೆ ವಿರೋಧಿಸಿದಳು. ಬಳಿಕ ತಲೆಗೆ ಗುಂಡಿಕ್ಕಿ ಕೊಂದು ಪರಾರಿಯಾದರು ಎಂದು ಸಂತ್ರಸ್ತೆಯ ತಂದೆ ಹೇಳಿಕೆ ನೀಡಿದ್ದಾರೆ. ಆರೋಪಿಗಳನ್ನು ಮನೀಶ್ ಯಾದವ್, ಶಿವಪಲಿ ಯಾದವ್ ಮತ್ತು ಗೌರವ್ ಚಾಕ್ ಎಂದು ಸಂತ್ರಸ್ತೆಯ ತಂದೆ ಹೆಸರಿಸಿದ್ದಾರೆ.
ಘಟನೆ ಕುರಿತು ಮಾಧ್ಯಮದೊಂದಿಗೆ ಮಾತನಾಡಿರುವ ಎಸ್ಎಸ್ಪಿ ಸಚಿಂದ್ ಕುಮಾರ್ ಪಟೇಲ್, ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಘಟನಾ ಮಾಹಿತಿ ತಿಳಿದ ತಕ್ಷಣ ಆರೋಪಿಗಳನ್ನು ಬಂಧಿಸಲು ತೆರಳಿದೆವು. ಆದರೆ, ಆರೋಪಿಗಳು ಪರಾರಿಯಾಗಿದ್ದರು. ಈ ವೇಳೆ ಸಂತ್ರಸ್ತೆಯ ತಂದೆ ಮೂವರು ಹೆಸರನ್ನು ಹೇಳಿದರು. ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)