ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳು ಅಷ್ಟು ಸುಲಭಕ್ಕೆ ಗಲ್ಲುಶಿಕ್ಷೆಯನ್ನು ಒಪ್ಪಿಕೊಳ್ಳುವಂತೆ ಕಾಣಿಸುತ್ತಿಲ್ಲ. ಮರಣದಂಡನೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಪಟಿಯಾಲಾ ಕೋರ್ಟ್ ವಜಾಗೊಳಿಸಿ, ಮಾ.20ರಂದು ಗಲ್ಲುಶಿಕ್ಷೆ ಫಿಕ್ಸ್ ಎಂದು ಆದೇಶ ನೀಡಿತ್ತು. ಆದರೆ ಈಗ ಮೂವರು ಅಪರಾಧಿಗಳು ಮತ್ತೊಂದು ಕಾನೂನು ಹೋರಾಟ ನಡೆಸಿದ್ದಾರೆ.
ದೆಹಲಿ ಪಟಿಯಾಲಾ ಕೋರ್ಟ್ ಅರ್ಜಿ ವಜಾ ಮಾಡುತ್ತಿದ್ದಂತೆ ಅಪರಾಧಿಗಳಾದ ಅಕ್ಷಯ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ತಮ್ಮ ವಕೀಲ ಎ.ಪಿ.ಸಿಂಗ್ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗಲ್ಲುಶಿಕ್ಷೆಗೆ ತಡೆಕೋರಿ ಸಲ್ಲಿಸಿದ ಅರ್ಜಿ ವಜಾ ಮಾಡಿದ ಪಟಿಯಾಲಾ ಹೌಸ್ ಕೋರ್ಟ್ನ ತೀರ್ಪು ಮರುಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠ ನಿರ್ಭಯಾ ಅತ್ಯಾಚಾರ ಅಪರಾಧಿಗಳ ಅರ್ಜಿಯನ್ನು ಇಂದು ರಾತ್ರಿಯೇ ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. (ಏಜೆನ್ಸೀಸ್)