ಬೆಂಗಳೂರು: ಕೃಷಿಕರೊಬ್ಬರು ಅಡಕೆ ಮಾರಾಟ ಮಾಡಿದ್ದ 26.5 ಲಕ್ಷ ರೂ.ಗಳನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಎಸ್.ಜೆ. ಪಾರ್ಕ್ ಠಾಣೆ ಎಸ್ಐ ಹಾಗೂ ಆತನ ಮಾವ ಬಂಧನಕ್ಕೊಳಗಾದ ಬೆನ್ನಲ್ಲೇ ಇದೀಗ ಮತ್ತೆ ನಾಲ್ವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿ ನ್ಯೂಟೌನ್ನ ನಿವಾಸಿ ಸಿಎಆರ್ ನಿವೃತ್ತ ಪೇದೆ ಎ. ಆರೋಗ್ಯಸ್ವಾಮಿ (67), ಕರ್ನಾಟಕ ರಾಜ್ಯ ಕಾರ್ವಿುಕರ ಹಿತರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕಲ್ಯಾಣನಗರ ಮೂಡಲಪಾಳ್ಯದ ನಿವಾಸಿ ಮಹೇಶ್ (46), ಬಸವೇಶ್ವರನಗರದ ಕಾರು ಚಾಲಕ ತಿಲಕ್ (22), ತ್ಯಾಗರಾಜನಗರದ ಛಾಯಾಗ್ರಾಹಕ ಕಿಶೋರ್(25) ಬಂಧಿತರು.
ಈ ನಾಲ್ವರೂ ಸೋಮವಾರ ಬಂಧಿತರಾದ ಎಸ್ಐ ಜೀವನ್ ಕುಮಾರ್ ಮತ್ತು ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಅಧ್ಯಕ್ಷ ಜ್ಞಾನಪ್ರಕಾಶ್ಗೆ ದರೋಡೆ ಕೃತ್ಯದಲ್ಲಿ ಸಹಕರಿಸಿದ್ದರು. ಜ್ಞಾನಪ್ರಕಾಶ್ ನೀಡಿದ ಸುಳಿವಿನ ಮೇಲೆ ಈ ನಾಲ್ವರನ್ನು ಬಂಧಿಸ ಲಾಗಿದೆ. ಶಿವಕುಮಾರಸ್ವಾಮಿ ಹಣ ತರುವ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿದ ತುಮಕೂರಿನ ಗುಬ್ಬಿಯ ವ್ಯಕ್ತಿ ಸೇರಿ ಇನ್ನೂ ಕೆಲ ಆರೋಪಿ ಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಡಿಸಿಪಿ ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ.
ಶಾಸಕರ ಮಾಜಿ ಗನ್ಮ್ಯಾನ್ ಶಾಮೀಲು: ಕೆಎಸ್ಆರ್ಪಿ ನಿವೃತ್ತ ಪೇದೆ ಆರೋಗ್ಯಸ್ವಾಮಿ ಈ ಹಿಂದೆ ಶಾಸಕ ಅರವಿಂದ ಲಿಂಬಾವಳಿ ಗನ್ವ್ಯಾನ್ ಆಗಿದ್ದ. ನಿವೃತ್ತಿ ಬಳಿಕ ಜ್ಞಾನಪ್ರಕಾಶ್ ಜತೆ ಆತನ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಕರ್ನಾಟಕ ರಾಜ್ಯ ಕಾರ್ವಿುಕರ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮಹೇಶ್ ತಾನು ಪತ್ರಿಕೆಯೊಂದರ ಸಂಪಾದಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಜತೆಗೆ, ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದ. ಕೆಲ ವರ್ಷಗಳಿಂದ ಜ್ಞಾನಪ್ರಕಾಶ್ನ ಆಪ್ತನಾಗಿ ಗುರುತಿಸಿಕೊಂಡಿದ್ದ. ಛಾಯಾಗ್ರಾಹಕ ಕಿಶೋರ್ ತುಮಕೂರು ಮೂಲದವನಾಗಿದ್ದು, ಹಣದ ಬಗ್ಗೆ ಜ್ಞಾನಪ್ರಕಾಶ್ಗೆ ಮಾಹಿತಿ ನೀಡಿದ್ದ. ಶಿವಕುಮಾರಸ್ವಾಮಿಯನ್ನು ಅಪಹರಿಸಲು ಕಾರು ಚಾಲಕ ತಿಲಕ್ ಸಹಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಕೃತ್ಯ?: ಎಸ್ಐ ಜೀವನ್ಕುಮಾರ್ ತಂಡ ಈ ಹಿಂದೆಯೂ ಇದೇ ರೀತಿಯ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂಬ ಸಂಶಯ ವ್ಯಕ್ತವಾಗಿದ್ದು, ತೀವ್ರ ವಿಚಾರಣೆ ನಡೆಸ ಲಾಗುತ್ತಿದೆ. ಆದರೆ, ಆರೋಪಿಗಳು ವಿಚಾರಣೆಗೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಕೆಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಜೀವನ್, ಸೋಮವಾರ ಇದ್ದ ಪರೀಕ್ಷೆಗೆ ತಯಾರಿ ನಡೆಸಿದ್ದ. ಪರೀಕ್ಷೆ ಬರೆಯಬೇಕು ಎನ್ನುವಷ್ಟರಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ದರೋಡೆ ಮಾಡಿದ 26.5 ಲಕ್ಷ ರೂ.ಗಳನ್ನು ಆರು ಮಂದಿ ಹಂಚಿಕೊಂಡಿದ್ದರು.