ಚಿಕ್ಕೋಡಿ: ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರ ಕನಸಿನ 144.62 ಕೋಟಿ ರೂ. ನೀರಾವರಿ ಯೋಜನೆ ಯಶಸ್ವಿಯಾಗಿದ್ದು, 26 ಹಳ್ಳಿಗಳ 12,637.07 ಹೆಕ್ಟೇರ್ ಜಮೀನು ಈಗ ಹಸಿರಾಗಲಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಖಡಕಲಾಟ ಗ್ರಾಮದ ಬಳಿ ಕಾಲುವೆಯ ಅಂತಿಮ ಬಿಂದುವರಗೆ ಹರಿದ ನೀರಿಗೆ ಈಚೆಗೆ ಗಂಗಾಪೂಜೆ ನೇರವೆರಿಸಿ ಮಾತನಾಡಿ, ಕಲ್ಲೋಳ ಬಳಿ ಕಷ್ಣಾ ನದಿಯಿಂದ ನೀರು ಎತ್ತುವ ಘಟಕ ಸ್ಥಾಪನೆ ಮಾಡಿ, ಅಲ್ಲಿಂದ 15 ಕಿಮೀ ದೂರದಲ್ಲಿರುವ ಚಿಕ್ಕೋಡಿ ಬಲದಂಡೆ ಕಾಲುವೆಗೆ ಸಂಬಂಧಿಸಿದ ಕೆನಾಲ್ಗೆ ನೀರು ಸಾಗಿಸಲಾಗುತ್ತದೆ. ನೀರು ಸಾಗಿಸಲು 1.8 ಮೀಟರ್ ಸುತ್ತಳತೆಯ 15,200 ಮೀಟರ್ ಪೈಪ್ ಅಳವಡಿಕೆ ಮಾಡಲಾಗಿದೆ. ನದಿಯಿಂದ ನೀರು ಎತ್ತಲು ಅತ್ಯಾಧುನಿಕ ಊದು ಯಂತ್ರಗಳನ್ನು ಬಳಕೆ ಮಾಡಲಾಗಿದ್ದು, 2470ಎಚ್ಪಿ ಸಾಮರ್ಥ್ಯದ ಒಂದೊಂದು ಪಂಪ್ನಿಂದ ಪ್ರತಿ ಗಂಟೆಗೆ 4050 ಕ್ಯೂಬಿಕ್ ನೀರು ಎತ್ತಲಿವೆ ಎಂದರು. ರವಿಂದ್ರ ಮಿರ್ಜಿ, ಕುಮಾರ ಪಾಟೀಲ, ಸತೀಶ ಪಾಟೀಲ, ರಾಕೇಶ ಚಿಂಚಣೆ, ವಾಸು ಗಾವಡೆ, ಲಕ್ಷ್ಮಣ ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.