ಬೆಂಗಳೂರು: ಕಡಿಮೆ ಅವದಿಯಲ್ಲಿ ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಷವೊಡ್ಡಿ 25 ಕೋಟಿ ರೂ. ವಂಚನೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕನಕಪುರದ ಹಾರೋಹಳ್ಳಿ ನಿವಾಸಿ ಪ್ರದೀಪ್ (34), ನಾಗವಾರ ನಿವಾಸಿ ವಂಸತ್ಕುಮಾರ್ (35) ಬಂಧಿತರು. ತಲೆಮರೆಸಿಕೊಂಡಿರುವ ಸೌಮ್ಯಾ ಎಂಬಾಕೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಪ್ರಮ್ಯ ಇಂಟರ್ ನ್ಯಾಷನಲ್ ಕಂಪನಿ ಹೆಸರಿನಲ್ಲಿ 700ಕ್ಕೂ ಅಧಿಕ ಹೂಡಿಕೆದಾರರಿಂದ 25 ಕೋಟಿ ರೂ.ನಷ್ಟು ಹಣ ಪಡೆದು ಮೋಸ ಮಾಡಿದ್ದರು. ಕಚೇರಿ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ 7 ಲಕ್ಷ ರೂ. ನಗದು ಮತ್ತು ಕಂಪ್ಯೂಟರ್ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
2021ರಲ್ಲಿ ಜೆ.ಪಿ.ನಗರ 9ನೇ ಹಂತದ ದೊಡ್ಡಕಲ್ಲಸಂದ್ರದ ನಾರಾಯಣನಗರದಲ್ಲಿ ಪ್ರಮ್ಯ ಇಂಟರ್ನ್ಯಾಷನಲ್ ಕಂಪನಿ ಹೆಸರಿನಲ್ಲಿ ಕಚೇರಿ ತೆರೆದಿದ್ದರು. ಸಾಮಾಜಿಕ ಜಾಲತಾಣದಲ್ಲಿ ‘ಮೇಕ್ ಯುವರ್ ಮನಿ ವರ್ಕ್ ಾರ್ ಯೂವರ್’ ಎಂದು ಜಾಹೀರಾತು ಹಾಕಿದ್ದರು. ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೇ ಶೇ.30ಕ್ಕಿಂತ ಹೆಚ್ಚಿನ ಬಡ್ಡಿ ನೀಡುವುದಾಗಿ ಭರವಸೆ ನೀಡಿದ್ದರು. ನಿಶ್ಚಿತ ಠೇವಣಿ ಮೇಲೆ ನಾಲ್ಕು ಪಟ್ಟು ಲಾಭ ಸಿಗಲಿದೆ. 5 ಸಾವಿರ ರೂ.ಯಿಂದ 10 ಲಕ್ಷ ರೂ.ವರೆಗೂ ಹೂಡಿಕೆ ಮಾಡಬಹುದು. ಹೂಡಿಕೆ ಮಾಡಿದ ಹಣಕ್ಕೆ ಸೆಕ್ಯೂರಿಟಿ ನೀಡುವುದಾಗಿ ಸುಳ್ಳು ಭರವಸೆ ನೀಡಿ ಅಮಾಯಕರಿಂದ ಹಣ ಸಂಗ್ರಹಿಸುತ್ತಿದ್ದರು.
ಇದೇ ರೀತಿಯಲ್ಲಿ 700ಕ್ಕೂ ಅಧಿಕ ಹೂಡಿಕೆದಾರರು ಹಣ ಹೂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪ್ರಮ್ಯ ಇಂಟರ್ನ್ಯಾಷನಲ್ ಕಂಪನಿ ಕುರಿತು ಪರಿಶೀಲನೆ ನಡೆಸಿದಾಗ ಕಾನೂನಾತ್ಮಕವಾಗಿ ಎಲ್ಲಿಯೂ ನೋಂದಣಿ ಮಾಡಿಕೊಂಡಿರಲಿಲ್ಲ. ಕಾನೂನು ಬಾಹಿರವಾಗಿ ಅಮಾಯಕ ಜನರಿಗೆ ಆಮಿಷವೊಡ್ಡಿ ಹಣ ಸಂಗ್ರಹ ಮಾಡುತ್ತಿರುವುದು ಖಚಿತವಾಯಿತು. ಇದರ ಮೇರೆಗೆ ಕಂಪನಿ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಹೂಡಿಕೆ ಮಾಡಿಸಿಕೊಂಡಿರುವ ಹಣದಲ್ಲಿ ಅಂದಾಜು 8 ಕೋಟಿ ರೂ.ಗೂ ಅಧಿಕ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಖರೀದಿಸಿ, ವೈಯಕ್ತಿಕ ಲಾಭ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು. ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.