ಮುಂಬೈ: ಕ್ರೂಸ್ ಶಿಪ್ ಡ್ರಗ್ಸ್ ಕೇಸಿನಲ್ಲಿ ಶಾರುಖ್ ಖಾನ್ ಪುತ್ರನನ್ನು ಬಂಧಿಸಿದ ನಂತರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಅಧಿಕಾರಿ ಸಮೀರ್ ವಾಂಖೇಡೆ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಇದೀಗ ಎನ್ಸಿಬಿ ವಿಜಿಲೆನ್ಸ್ ತನಿಖೆ ನಡೆಸುತ್ತಿದೆ.
ಡ್ರಗ್ಸ್ ದಾಳಿ ಕೇಸಿನಲ್ಲಿ ಸ್ವತಂತ್ರ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ 25 ಕೋಟಿ ರೂಪಾಯಿ ವಸೂಲಿ ದಂಧೆ ನಡೆಯುತ್ತಿದ್ದು, ಎನ್ಸಿಬಿ ವಲಯ ನಿರ್ದೇಶಕರೂ ಪ್ರಕರಣದ ತನಿಖಾಧಿಕಾರಿಯೂ ಆದ ವಾಂಖೇಡೆ ಅವರು ಅದರ ಭಾಗವಾಗಿದ್ದಾರೆ ಎಂದು ಭಾನುವಾರ ಅಫಿಡೆವಿಟ್ನಲ್ಲಿ ಹೇಳಿದ್ದರು. ತನಿಖಾಧಿಕಾರಿಗಳು ತಮ್ಮಿಂದ ಖಾಲಿ ಕಾಗದಗಳ ಮೇಲೆ ಸಹಿ ಪಡೆದಿದ್ದಾರೆ ಎಂದೂ ಆರೋಪಿಸಿದ್ದರು.
ಎನ್ಸಿಬಿಯ ಉತ್ತರ ಭಾಗದ ಡೆಪ್ಯುಟಿ ಡೈರೆಕ್ಟರ್ ಜನರಲ್(ಡಿಡಿಜಿ) ಗ್ಯಾನೇಶ್ವರ್ ಸಿಂಗ್ ಅವರ ನೇತೃತ್ವದಲ್ಲಿ ಈ ಭ್ರಷ್ಟಾಚಾರದ ಆರೋಪದ ತನಿಖೆ ಆರಂಭವಾಗಿದೆ. “ಸಾರ್ವಜನಿಕವಾಗಿ ಲಭ್ಯವಿರುವ ಅಫಿಡೆವಿಟ್ ಮತ್ತು ಸೌತ್ ವೆಸ್ಟ್ ರೀಜನ್ ಡಿಡಿಜಿ ಅವರಿಂದ ಬಂದ ವರದಿಯ ಆಧಾರದ ಮೇಲೆ ನಾವು ವಿಜಿಲೆನ್ಸ್ ಎಂಕ್ವೈರಿ ಆರಂಭಿಸಿದ್ದೇವೆ” ಎಂದು ಮುಂಬೈ ತಲುಪಿರುವ ಸಿಂಗ್ ಹೇಳಿದ್ದಾರೆ.
ಸಮೀರ್ ವಾಂಖೇಡೆ ಅವರು ಕ್ರೂಸ್ ಶಿಪ್ ಡ್ರಗ್ಸ್ ಕೇಸಿನ ಮುಖ್ಯಸ್ಥರಾಗಿ ಮುಂದುವರಿಯುವರೇ ಎಂಬ ಪ್ರಶ್ನೆಗೆ, “ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಈಗಿನ್ನೂ ತನಿಖೆ ಆರಂಭಿಸಿದ್ದೇವೆ. ಮೊದಲು ಆರೋಪಗಳನ್ನು ತನಿಖೆ ಮಾಡೋಣ” ಎಂದಿದ್ದಾರೆ. ಇದೇ ಹಿನ್ನೆಲೆಯಲ್ಲಿ ದೆಹಲಿ ತಲುಪಿದ್ದಾರೆ ಎನ್ನಲಾದ ವಾಂಖೇಡೆ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದು, ತಮ್ಮನ್ನು ದುರುದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್)
ಇಂದು ಹೈಕೋರ್ಟಲ್ಲಿ ಶಾರುಖ್ ಪುತ್ರನ ಜಾಮೀನು ಪ್ರಕರಣ; ಮಾಜಿ ಅಟೋರ್ನಿ ಜನರಲ್ ವಕಾಲತ್ತು