ಲಖನೌ: ವಲಸೆ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಟ್ರಕ್ ಉತ್ತರಪ್ರದೇಶದ ಔರೈಯಾ ಎಂಬಲ್ಲಿ ಮತ್ತೊಂದು ಟ್ರಕ್ಗೆ ಡಿಕ್ಕಿಯಾಗಿ 23 ಜನರು ಮೃತಪಟ್ಟಿದ್ದಾರೆ. 15ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದ್ದು, 20 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಲಸೆ ಕಾರ್ಮಿಕರು ಬಿಹಾರ್, ಜಾರ್ಖಂಡ್, ಪಶ್ಚಿಮ ಬಂಗಾಳಕ್ಕೆ ಸೇರಿದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿಷೇಕ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ; ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರ್ಮಿಕರ ಮೇಲೆ ಹರಿದ ಬಸ್, ಪ್ರತ್ಯೇಕ ಪ್ರಕರಣದಲ್ಲಿ 14 ಜನರ ಸಾವು
ವಲಸೆ ಕಾರ್ಮಿಕರಿದ್ದ ಟ್ರಕ್ ರಾಜಸ್ಥಾನದಿಂದ ಬರುತ್ತಿತ್ತು. ಬೆಳನ ಜಾವ 3.30ರಲ್ಲಿ ಅಪಘಾತ ಸಂಭವಿಸಿದೆ. ಮೂರು ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್ ಅಪಘಾತಕ್ಕೀಡಾದ ಎರಡನೇ ಪ್ರಕರಣ ಇದಾಗಿದೆ. ಮುಜಫ್ಫರನಗರದಲ್ಲೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ 8 ಜನರು ಮೃತಪಟ್ಟಿದ್ದರು.
ದೇಶಾದ್ಯಂತ ಲಾಕ್ಡೌನ್ನಿಂದಾಗಿ ಉದ್ಯೋಗ ಕಳೆದುಕೊಂಡಿರುವ ಕಾರ್ಮಿಕರು ಕಾಲ್ನಡಿಗೆಯಲ್ಲಿ ಅಥವಾ ಟ್ರಕ್, ಲಾರಿಗಳನ್ನು ಏರಿ ತಮ್ಮೂರುಗಳಿಗೆ ತೆರಳುತ್ತಿದ್ದಾರೆ.