ಹುಕ್ಕೇರಿ: ಪಟ್ಟಣ ಹೊರವಲಯದ ತೋಟದ ಮನೆಯೊಂದರ ಮೇಲೆ ಬುಧವಾರ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದ 210 ಕ್ವಿಂಟಾಲ್ ಅನ್ನಭಾಗ್ಯ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ರಾಯಬಾಗ ತಾಲೂಕು ನಿಪನಾಳ ಗ್ರಾಮದ ಲಾರಿ ಚಾಲಕ ಸಂತೋಷ ಶಿವಾಜಿ ಕುರಣಿ (26), ಹುಕ್ಕೇರಿ ಪಟ್ಟಣದ ರವಿ ಶಿವಾನಂದ ಗಜಬರ ಎಂಬುವರ ಮೇಲೆ ದೂರು ದಾಖಲಾಗಿದೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ, 7.14 ಲಕ್ಷ ರೂ. ಮೌಲ್ಯದ 420 ಚೀಲಗಳುಳ್ಳ 210 ಕ್ವಿಂಟಾಲ್ ಪಡಿತರ ಅಕ್ಕಿ ಹಾಗೂ 15 ಲಕ್ಷ ರೂ. ಬೆಲೆಬಾಳುವ ಲಾರಿ ವಶಪಡಿಸಿಕೊಳ್ಳಲಾಗಿದೆ. ಆಹಾರ ನಿರೀಕ್ಷಕ ವೀರಭದ್ರ ಶೇಬನ್ನವರ ಅವರು ಆರೋಪಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7ನೇ ಅಡಿ ದೂರು ನೀಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.