ಹೊನ್ನಾಳಿ: ಅಕ್ರಮವಾಗಿ ಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, 21 ಕೆಜಿ ಶ್ರೀಗಂಧವನ್ನು ಬುಧವಾರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಸಿದ್ದೇಗೌಡ ತಿಳಿಸಿದ್ದಾರೆ.
ತಾಲೂಕಿನ ಕುಳಗಟ್ಟೆ ಬಳಿ ಬುಧವಾರ ಅಕ್ರಮವಾಗಿ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಪಿಎಸ್ಐ ಸಿದ್ದಪ್ಪ ಹಾಗೂ ಸಿಬ್ಬಂದಿ ದಾಳಿ ನಡೆಸಿ ಸುಮಾರು 42 ಸಾವಿರ ರೂ. ಮೌಲ್ಯದ 21 ಕೆಜಿ ಗಂಧದ ಮರಗಳ ತುಂಡು ವಶಪಡಿಸಿಕೊಂಡು, ಸೈಯದ್ ಅಲ್ಲಾಭಕ್ಷಿ, ಮಹಮದ್ ರಫೀಕ್ ಹಾಗೂ ನೂರುಲ್ಲಾನನ್ನು ವಶಕ್ಕೆ ಪಡೆದು, ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ದಾಳಿಯಲ್ಲಿ ಪಾಲ್ಗೊಂಡಿದ್ದ ಎಎಸ್ಐಗಳಾದ ಪರಶುರಾಮ್, ದೊಡ್ಡಬಸಪ್ಪ, ಸಿಬ್ಬಂದಿ ಧರ್ಮಪ್ಪ, ಸಿದ್ದನಗೌಡ, ರಾಘವೇಂದ್ರ, ಮಂಜುನಾಥ್, ಸುರೇಶ್ ನಾಯ್ಕ ಅವರ ಕಾರ್ಯಕ್ಕೆ ಎಸ್ಪಿ ಡಾ. ಅರುಣ್ ಪ್ರಶಂಸಿಸಿ, ಶ್ಲಾಘಿಸಿದ್ದಾರೆ.