ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಿಮ ವರ್ಷದ ಪದವಿ ಭೌತಿಕ ತರಗತಿ ಸೆ.17ರಂದು ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಕುರಿತು ಅಧಿಕೃತ ಆದೇಶ ಮತ್ತು ನಿಯಮಾವಳಿಗಳನ್ನು ಬುಧವಾರ ಪ್ರಕಟಿಸುವುದಾಗಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಶಾಲಾರಂಭ ಅಧಿಕೃತ ಆದೇಶ: ಕೋವಿಡ್ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸೆ.17ರಂದು 8, 9 ಮತ್ತು 10ನೇ ತರಗತಿ ಮತ್ತು ಸೆ.20ರಿಂದ 6 ಮತ್ತು 7ನೇ ತರಗತಿ ಆರಂಭಿಸಲು ನಿರ್ಧರಿಸಲಾಗಿದ್ದು, ಜಿಲ್ಲಾಡಳಿತ ನಿಯಮಾವಳಿಯೊಂದಿಗೆ ಅಧಿಕೃತ ಆದೇಶ ಹೊರಡಿಸಿದೆ.
ಸಂಸ್ಥೆಯಲ್ಲಿ ಕೋವಿಡ್ ನಿಯಮಾವಳಿ ಅನುಷ್ಠಾನ ಸಂಪೂರ್ಣ ಜವಾಬ್ದಾರಿ ಆಯಾ ಶಾಲಾ ಮುಖ್ಯಸ್ಥರು, ಮುಖ್ಯ ಶಿಕ್ಷಕರಿಗೆ ವಹಿಸಲಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳು
ಹಾಸ್ಟೆಲ್ಗಳಲ್ಲಿ ಉಳಿದುಕೊಳ್ಳಲು ಅಥವಾ ಆನ್ಲೈನ್ ತರಗತಿಯಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.
ಶಿಕ್ಷಕರು ಮತ್ತು ಸಿಬ್ಬಂದಿ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿ, ನೆಗೆಟಿವ್ ಪ್ರಮಾಣಪತ್ರದೊಂದಿಗೆ ಹಾಜರಾಗಬೇಕು. ಕೇರಳದಿಂದ ಬರುವ ಶಿಕ್ಷಕರು ಹಾಗೂ ಸಿಬ್ಬಂದಿ ಎರಡು ಡೋಸ್ ಪಡೆದಿದ್ದರೂ, 7 ದಿನಕ್ಕೊಮ್ಮೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿ, ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಶುಲ್ಕ ಪಾವತಿಸಲು ಒತ್ತಾಯಿಸುವಂತಿಲ್ಲ ಎಂದು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೂ ಸೂಚನೆ ನೀಡಲಾಗಿದೆ.
ನಾಳೆ ಪ್ರಥಮ ಪಿಯು ಆರಂಭ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ಭೌತಿಕ ತರಗತಿ ಆರಂಭಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು, ಸೆ.16ರಿಂದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ತರಗತಿ ಆರಂಭಿಸಲು ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಪಪೂ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಜಯಣ್ಣ ತಿಳಿಸಿದ್ದಾರೆ.
ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಗೆ ದಾಖಲಾದ ಒಟ್ಟು ವಿದ್ಯಾರ್ಥಿಗಳನ್ನು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ)ಕ್ಕೆ ಅನುಗುಣವಾಗಿ ತಂಡಗಳನ್ನಾಗಿ ಮಾಡಿ ಕೊಠಡಿ ಸಂಖ್ಯೆಯೊಂದಿಗೆ ವೇಳಾಪಟ್ಟಿ ತಯಾರಿಸಿ, ಮಧ್ಯಾಹ್ನ ಬಳಿಕ ತರಗತಿಗಳನ್ನು ನಡೆಸುವಂತೆ ಎಲ್ಲ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿದೆ.
ಕೇರಳದಿಂದ ನಿತ್ಯ ಬರುವ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗೆ ಆದ್ಯತೆ, ಪ್ರತಿದಿನ ಬರುವುದಿದ್ದಲ್ಲಿ 7 ದಿನಗಳಿಗೊಮ್ಮೆ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ. ಬೋಧಕ, ಬೋಧಕೇತರ ಸಿಬ್ಬಂದಿಗೂ ಇದೇ ನಿಯಮ ಅನ್ವಯಿಸುತ್ತದೆ. ಹೆತ್ತವರ ಒಪ್ಪಿಗೆ ಪತ್ರ ಕಡ್ಡಾಯದ ಜತೆಗೆ, ಭೌತಿಕ ತರಗತಿಗೆ ಹಾಜರಾಗಲು ಇಚ್ಛಿಸದವರು ಆನ್ಲೈನ್ ಮೂಲಕವೇ ತರಗತಿ ಮುಂದುವರಿಸಲೂ ಅವಕಾಶವಿದೆ. ತರಗತಿ ಕೊಠಡಿ ವಿಸ್ತೀರ್ಣಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆ ನಿಗದಿಪಡಿಸಬೇಕು.
ಪ್ರತಿದಿನ 5-10 ನಿಮಿಷ ಕೋವಿಡ್ ಜಾಗೃತಿ ಮೂಡಿಸುವುದು ಕಡ್ಡಾಯ. ಜಿಲ್ಲಾಧಿಕಾರಿಯ ಮುಂದಿನ ಆದೇಶದವರೆಗೆ ಸಮೂಹ ಪ್ರಾರ್ಥನೆ, ಸಭೆ, ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆ ನಿರ್ಬಂಧಿಸಲಾಗಿದೆ. ಕಾಲೇಜುಗಳ ಎಲ್ಲ ಸಿಬ್ಬಂದಿ ಕನಿಷ್ಠ 15 ದಿನಗಳಿಗೊಮ್ಮೆ ಸ್ವಇಚ್ಛೆಯಿಂದ ಆರ್ಟಿ-ಪಿಸಿಆರ್ ಟೆಸ್ಟ್ಗೆ ಒಳಪಡಬೇಕು ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ.