ಬಂಕಾಪುರ: ಪಟ್ಟಣದ ಖಿಲಾರಿ ತಳಿಯ ಗೋವು ಸಂವರ್ಧನಾ ಕೇಂದ್ರದಲ್ಲಿ ಹರಾಜು ಪ್ರಕ್ರಿಯೆ ಮೂಲಕ ಜಾನುವಾರುಗಳನ್ನು ಗುರುವಾರ ಮಾರಾಟ ಮಾಡಲಾಯಿತು.
ಕಳೆದ ಸಾಲಿನಲ್ಲಿ ನಡೆದ ಸಾರ್ವಜನಿಕ ಬಹಿರಂಗ ಹರಾಜಿನಲ್ಲಿ ವಿಲೇವಾರಿ ಆಗದೇ ಉಳಿದ ಜಾನುವಾರುಗಳನ್ನು ಕೇಂದ್ರದ ಅಧಿಕಾರಿಗಳು ಸರ್ಕಾರದ ಆದೇಶದ ಮೇರೆಗೆ ನೊಂದಾಯಿತ ಗೋ ಶಾಲೆ ಮತ್ತು ಸಂಸ್ಥೆಗಳಿಗೆ 16 ಆಕಳು ಮತ್ತು ಎರಡು ಹೋರಿಗಳನ್ನು ಹರಾಜಿನ ಮೂಲಕ ಮಾರಾಟ ಮಾಡಿದರು.
ಹರಾಜು ಪ್ರಕ್ರಿಯೆಯಲ್ಲಿ ಒಂದು ಸಂಸ್ಥೆ ಎರಡು ಗೋಶಾಲೆಗಳು ಪಾಲ್ಗೊಂಡಿದ್ದವು. ಇವುಗಳಲ್ಲಿ ಬಾಲೆಹೊಸೂರ ದಿಂಗಾಲೇಶ್ವರ ಮಠದ ಕುಮಾರೇಶ್ವರ ಜೀವ ವಿಕಾಸನ ಟ್ರಸ್ಟ್ ಗೋಶಾಲೆ ಎಂಟು ಆಕಳು, ಒಂದು ಹೋರಿ, ದಾವಣಗೆರೆ ಹೆಬ್ಬಾಳ ಮಠದ ಗೋಶಾಲೆ ಐದು ಆಕಳು, ಒಂದು ಹೋರಿ ಹಾಗೂ ಬೆಳಗಾವಿಯ ಯುನೈಟೆಡ್ ಸಮಾಜ ಕಲ್ಯಾಣ ಟ್ರಸ್ಟ್ಗೆ ಮೂರು ಆಕಳುಗಳನ್ನು ಮಾರಾಟ ಮಾಡಲಾಯಿತು.
ಗೋವು ತಳಿ ಸಂವರ್ಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಜೆ. ಪಂಪಾಪತಿ, ಬಂಕಾಪುರ ಕೇಂದ್ರದ ಉಪನಿರ್ದೇಶಕ ಡಾ. ಬಸವರಾಜ ಹಿರೇಮಠ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅನೀಲ ಎಸ್. ಪಾಟೀಲ, ಜ್ಯೋತಿ ಹಿರೇಮಠ, ಬಿ.ಎಚ್. ಬ್ಯಾಡಗಿ, ಕೃಷ್ಣಾ ನಾಯಕ ಇದ್ದರು.
ದೇಸಿ ತಳಿ ಉಳಿಸುವ ಉದ್ದೇಶದಿಂದ ಬಾಲೆಹೊಸೂರ ಮಠದಲ್ಲಿ 200 ದೇಸಿ ಆಕಳು ಸಾಕಾಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ರಾಜ್ಯದ ಅಜ್ಜಂಪುರ ಫಾಮ್ರ್ ಸೇರಿ ಸರ್ಕಾರದ ವಿವಿಧ ಫಾಮರ್್ಗಳಲ್ಲಿ ಆರೈಕೆ ಮಾಡಲಾಗದ, ಬೇಡವಾದ ಅಂದಾಜು 3000ಕ್ಕೂ ಅಧಿಕ ಆಕಳುಗಳಿವೆ. ಇವುಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸಲು ನಾವು ಇವುಗಳಲ್ಲಿ ಅಮೃತ ತಳಿಯ 350 ಆಕಳುಗಳಿಗೆ ಬೇಡಿಕೆ ಇಟ್ಟಿದ್ದೇವೆ. ಅವುಗಳಲ್ಲಿ ಬಾಲೆಹೊಸೂರಿಗೆ 100, ಶಿವಯೋಗ ಮಂದಿರಕ್ಕೆ 200, ಹೋಸಪೇಟೆ ಶ್ರೀಗಳಿಗೆ 50 ಜಾನುವಾರುಗಳನ್ನು ಕೊಡುವಂತೆ ತಿಳಿಸಿದ್ದೇವೆ. ಇವುಗಳ ವಿಲೇವಾರಿಗೆ ಸರ್ಕಾರ ಇನ್ನೂ ಅಧಿಕೃತ ಆದೇಶ ಮಾಡಿಲ್ಲ.
| ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಬಾಲೆಹೊಸೂರ