ತೀರ್ಥಹಳ್ಳಿ: ಮಲೆ ಮಹದೇಶ್ವರ ಬೆಟ್ಟದಿಂದ ಹೊರಟಿರುವ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ಶಾಸಕರು ಇಲ್ಲದ ಕ್ಷೇತ್ರಗಳೂ ಸೇರಿದಂತೆ ರಾಜ್ಯಾದ್ಯಂತ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ. ಈ ಯಾತ್ರೆ ಮಾ.15ರಂದು ತಾಲೂಕಿಗೆ ಆಗಮಿಸಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಸಹಿತ ಪ್ರಮುಖ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜಯ ಸಂಕಲ್ಪ ಯಾತ್ರೆ ಆಗಮನಕ್ಕೆ ಮುಂಚಿತವಾಗಿ ಜಿಲ್ಲಾಮಟ್ಟದ ಬಿಜೆಪಿ ರೈತ ಮೋರ್ಚಾ ಸಮಾವೇಶ ಆಯೋಜಿಸಲಾಗಿದೆ. ಪಟ್ಟಣದ ದೊಡ್ಡಮನೆಕೇರಿಯಿಂದ ಕುಶಾವತಿವರೆಗೆ ಮುಖ್ಯರಸ್ತೆಯಲ್ಲಿ ಬೃಹತ್ ರೋಡ್ ಶೋ ಸಹ ನಡೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆ ಮಾತ್ರವಲ್ಲದೇ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೂಡಾ ರೈತರಿಗೆ ವಿಶೇಷ ನೆರವು ನೀಡುತ್ತಿದೆ. ರೈತರಿಗೆ 5 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುವುದಲ್ಲದೆ ರೈತ ಮಹಿಳೆಯರಿಗೆ ಮಾಸಿಕ ತಲಾ 1000 ರೂ. ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.