ಬೆಂಗಳೂರು: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಮೇ 10 ರಿಂದ ಮೇ 24 ರವೆರೆಗೆ ಕರ್ನಾಟಕವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಘೋಷಿಸಿದ್ದಾರೆ.
ಬರುವ ಸೋಮವಾರದಿಂದ 14 ದಿನ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ಡೌನ್ ಇರಲಿದೆ. ಇಂದು ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಯಡಿಯೂರಪ್ಪ ಮಾತನಾಡಿದರು.
ದಿನಸಿ, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮಾರಲು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯಿಂದ ಜಿಲ್ಲೆಗೆ ಓಡಾಟಕ್ಕೆ ಅವಕಾಶ ನೀಡಲಾಗಿಲ್ಲ. ತಳ್ಳುಗಾಡಿಯ ಮೂಲಕ ಹಣ್ಣು ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಬಾರ್ಗಳನ್ನು ಬಂದ್ ಮಾಡಲಾಗಿರುತ್ತದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮದ್ಯದ ಪಾರ್ಸಲ್ಗೆ ಅವಕಾಶ ಇರಲಿದೆ.
ಕೈಗಾರಿಕೆ ಹಾಗೂ ಇನ್ನಿತರ ಕಟ್ಟಡ ಕಾಮಗಾರಿಗಳಿಗೆ ಹೊರಗಿನಿಂದ ಜನ ಬಂದು ಕೆಲಸ ಮಾಡುವುದಕ್ಕೆ ಅವಕಾಶ ಇಲ್ಲ. ಈ ಲಾಕ್ಡೌನ್ ತಾತ್ಕಾಲಿಕವಾಗಿದ್ದು ಕಾರ್ಮಿಕರು ವಲಸೆ ಹೋಗದಿರುವಂತೆ ಸಿಎಂ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮೆಟ್ರೋ ಕೂಡ ಬಂದ್ ಮಾಡಲಾಗಿರುತ್ತದೆ. ತುರ್ತು ಸಂದರ್ಭದಲ್ಲಿ ಮಾತ್ರ ಆಟೋ, ಟ್ಯಾಕ್ಸಿ ಬಳಸಲು ಅವಕಾಶ ನೀಡಲಾಗಿದೆ.
ಕರೊನಾ ತಡೆಗೆ ಇಷ್ಟೇಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಇಂದು ಅತೀ ಹೆಚ್ಚು ಸಾವು ಸಂಭವಿಸಿವೆ. ಜನ ಲಾಕ್ಡೌನ್ಗೆ ಸಹಕಾರ ನೀಡಬೇಕು. ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.