ಸೋಮವಾರಪೇಟೆ: ರೋಟರಿ ಸಂಸ್ಥೆಯಿಂದ ಜಿಲ್ಲೆಯಲ್ಲಿ 100 ಅಂಗನವಾಡಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಎಚ್.ಆರ್.ಕೇಶವ್ ಹೇಳಿದರು.
ಪ್ರಸಕ್ತ ಅಂಗನವಾಡಿಗಳು ಮಗುವಿನ ಮೊದಲ ಪಾಠಶಾಲೆಯಾಗಿವೆ. ಅಂಗನವಾಡಿ ಶಿಕ್ಷಕಿಯೇ ಮೊದಲು ಗುರುವಾಗಿದ್ದಾರೆ. ಪಾಲಕರು ಕೆಲಸದ ಒತ್ತಡದಿಂದ ಒಂದು ವರ್ಷಕ್ಕೆ ಮಗುವನ್ನು ಅಂಗನವಾಡಿಗೆ ಸೇರಿಸುವಂತಹ ಪರಿಸ್ಥಿತಿ ಬಂದಿದ್ದು, ಅಂಗನವಾಡಿಗಳಿಗೆ ಸೌಲಭ್ಯಗಳನ್ನು ಒದಗಿಸಿದರೆ ಮಕ್ಕಳ ಬೆಳವಣಿಗೆಗೆ ಉಪಯೋಗವಾಗಲಿದೆ ಎಂದು ಮಂಗಳವಾರ ರೋಟರಿ ಹಾಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂಗನವಾಡಿಗಳ ಕಟ್ಟಡ ದುರಸ್ತಿ, ಶೌಚಗೃಹ, ಪೀಠೋಪಕರಣ, ಕ್ರೀಡಾ ಆಟಿಕೆಗಳು, ಅಡಿಗೆಪಾತ್ರೆಗಳನ್ನು ಖರೀದಿಸಿ ಕೊಡಲಾಗುವುದು ಎಂದು ಹೇಳಿದರು.
ಸೋಮವಾರಪೇಟೆ ರೋಟರಿ ಹಿಲ್ಸ್ ಅತ್ಯುತ್ತಮ ಕ್ಲಬ್ ಆಗಿದೆ. ಅನೇಕ ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ. ಸಾರ್ವಜನಿಕ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ನಿರ್ಮಾಣ ಮಾಡಿದ್ದಾರೆ. ಬಜೆಗುಂಡಿಯಲ್ಲಿ ಪ್ರಯಾಣಿಕರ ತಂಗುದಾಣ ಉದ್ಘಾಟನೆಯಾಗಿದೆ. ಶವಪೆಟ್ಟಿಗೆ(ಐಸ್ ಬಾಕ್ಸ್) ಖರೀದಿಸಿ ಸಾರ್ವಜನಿಕರ ಉಪಯೋಗಕ್ಕೆ ಸರ್ಕಾರಿ ಆಸ್ಪತ್ರೆಗೆ ನೀಡಲಾಗುವುದು ಎಂದು ಹೇಳಿದರು.
ರೋಟರಿ ಸಂಸ್ಥೆಗೆ 120 ವರ್ಷಗಳ ಇತಿಹಾಸವಿದ್ದು, ಪ್ರಪಂಚದ 200 ದೇಶಗಳಲ್ಲಿ ರೋಟರಿ ಸಂಸ್ಥೆಗಳು ಸಮಾಜಸೇವೆಯಲ್ಲಿ ತೊಡಗಿಕೊಂಡಿವೆ. ಪೊಲೀಯೋ ನಿರ್ಮೂಲನೆ ಕಾರ್ಯದಲ್ಲಿ ಯಶಸ್ಸುಗಳಿಸಿದೆ. ಪಾಕಿಸ್ಥಾನ ಮತ್ತು ಅಫ್ಘಾನಿಸ್ತಾನ ಹೊರತುಪಡಿಸಿ, ಪ್ರಪಂಚವೇ ಪೊಲೀಯೋ ಮುಕ್ತವಾಗಿದೆ.
3181ರೋಟರಿ ಜಿಲ್ಲೆಗೆ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಜಿಲ್ಲೆಗಳು ಸೇರಿದ್ದು, 88 ಕ್ಲಬ್ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಸದಸ್ಯರು ಸಮಾಜ ಸೇವೆಗೆ ಒಂದಿಷ್ಟು ಸಮಯ ವಿನಿಯೋಗಿಸುವುದರೊಂದಿಗೆ ಸಂಸ್ಥೆಗೆ ಧನ ಸಹಾಯ ಮಾಡುತ್ತಿದ್ದಾರೆ. ದಾನಿಗಳ ಹಣ ಬಡವರ ಉದ್ಧಾರಕ್ಕೆ ವಿನಿಯೋಗವಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ವಸಂತ್ ನಂಗಾರು, ಸಹಾಯಕ ಪ್ರಾಂತಪಾಲ ಎಂ.ಡಿ. ಲಿಖಿತ್, ವಲಯ ಸೇನಾನಿ ಉಲ್ಲಾಸ್ ಕೃಷ್ಣ, ಕ್ಲಬ್ ಕಾರ್ಯದರ್ಶಿ ಚೇತನ್ ಚಂದ್ರಾಜು, ಮಾಜಿ ಸಹಾಯಕ ಪ್ರಾಂತಪಾಲ ಪಿ.ಕೆ.ರವಿ ಇದ್ದರು.