ಬೆಳಗಾವಿ: ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿರುವ ಕರೊನಾ ಸೋಂಕು, ಬೆಳಗಾವಿ ಜಿಲ್ಲೆಯ 117 ಶಿಕ್ಷಕರನ್ನು ಬಲಿ ಪಡೆದಿದೆ. ಮೊದಲ ಅಲೆಯಲ್ಲಿ 41 ಶಿಕ್ಷಕರು ಮೃತಪಟ್ಟಿದ್ದರೆ, 2ನೇ ಅಲೆಯಲ್ಲಿ 76 ಶಿಕ್ಷಕರು ಪ್ರಾಣ ತೆತ್ತಿದ್ದಾರೆ. ಜಿಲ್ಲೆಯೊಂದರಲ್ಲೇ ನೂರಾರು ಶಿಕ್ಷಕರು ಕೋವಿಡ್ನಿಂದ ಮೃತಪಟ್ಟಿರುವುದು ಗುರುವೃಂದದಲ್ಲಿ ಆತಂಕ ಸೃಷ್ಟಿಸಿದೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 56, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 61 ಶಿಕ್ಷಕರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 27 ಶಿಕ್ಷಕರು ಬೆಳಗಾವಿ ಲೋಕಸಭಾ ಉಪಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದರು.
ಅನುಕಂಪದ ನೌಕರಿಗೆ ಕ್ರಮ: ಕರೊನಾದಿಂದ ಮೃತಪಟ್ಟ ಶಿಕ್ಷಕರ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡುವ ಸಲುವಾಗಿ ಮಾಹಿತಿ ಕಲೆಹಾಕಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ವೈದ್ಯಕೀಯ ವೆಚ್ಚ ಸೇರಿ ಹಲವು ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲು ಕ್ರಮ ವಹಿಸಲಾಗಿದೆ ಎಂದು ಬೆಳಗಾವಿ ಡಿಡಿಪಿಐ ಡಾ.ಎ.ಬಿ. ಪುಂಡಲೀಕ ಹಾಗೂ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ತಿಳಿಸಿದ್ದಾರೆ.