ದಾವಣಗೆರೆ: ದಾವಣಗೆರೆ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ-ಸಾರ್ವಜನಿಕರಿಗೆ ಶೌಚಗೃಹವಿಲ್ಲ. ವಿದ್ಯುತ್ ಸ್ಥಗಿತಗೊಂಡರೆ ಕಂಪ್ಯೂಟರ್ಗಳೂ ಬಂದ್ ಆಗುತ್ತವೆ. ಇಲ್ಲಿನ ಸಮಸ್ಯೆಗಳಿಂದಾಗಿ ಸಾರ್ವಜನಿಕರ ಕೆಲಸಗಳೂ ವಿಳಂಬವಾಗುತ್ತಿವೆ. ಈ ಅವ್ಯವಸ್ಥೆ ಸರಿಪಡಿಸಿ..
ನಗರಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳು ಮಂಜುನಾಥ, ಸದಸ್ಯ ಎ.ನಾಗರಾಜ್ ಮಂಗಳವಾರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಮನವರಿಕೆ ಮಾಡಿದರು.
ಗಡಿಯಾರ ಕಂಬದ ಬಳಿ ಹೊಸ ಕಟ್ಟಡ ನಿರ್ಮಾಣಗೊಂಡಿದ್ದರೂ ತಹಸೀಲ್ದಾರ್ ಕಚೇರಿ ಸ್ಥಳಾಂತರವಾಗಿಲ್ಲ. ತಿಂಗಳಿಗೆ 90 ಸಾವಿರ ರೂ. ಬಾಡಿಗೆಯನ್ನು ಎಪಿಎಂಸಿಗೆ ನೀಡಲಾಗುತ್ತಿದೆ. ಇದನ್ನು ತಪ್ಪಿಸಿ ಎಂದು ಹೇಳಿದರು.
ಹೊಸ ಕಟ್ಟಡದಲ್ಲಿ ಇನ್ನಷ್ಟು ಕೆಲಸ ಬಾಕಿ ಇದೆ ಎಂದು ತಹಸೀಲ್ದಾರ್ ಬಸನಗೌಡ ಕೋಟೂರ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ‘ನೂತನ ಕಟ್ಟಡ ಪರಿಶೀಲಿಸಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ವಿನೋಬನಗರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿನ ಲೋಪ ಸರಿಪಡಿಸುವ ಸಂಬಂಧ ಪಾಲಿಕೆ ಆಯುಕ್ತರು ಸೇರಿ ಯಾವುದೇ ಅಧಿಕಾರಿಗೂ ಬಂದು ಆಕ್ಷೇಪಣೆ ಖೇಳಿಲ್ಲ ಎಂದು ಎ.ನಾಗರಾಜ್ ಡಿಸಿ ಮಾತಿಗೆ ಉತ್ತರಿಸಿದರು.
ಕೈಬಿಟ್ಟು ಹೋಗಿದ್ದ ಎಲ್ಲ ಮತದಾರರ ಹೆಸರುಗಳನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಲಾಗಿದ್ದು, ಶೀಘ್ರವೇ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂಡು ಡಿಸಿ ಹೇಳಿದರು.
ಡಿಸಿ ಆದೇಶಕ್ಕೆ ಬೆಲೆಯಿಲ್ಲ!
ತಾಲ್ಲೂಕು ಕಚೇರಿಗೆ ಈ ಹಿಂದೆ ಭೇಟಿ ನೀಡಿದಾಗ ಸಬ್ ರಿಜಿಸ್ಟ್ರಾರ್ ಹೇಮಂತ್ರನ್ನು ಕರೆಸಿಕೊಂಡು, ಮಧ್ಯವರ್ತಿಗಳನ್ನು ನಿರ್ಬಂಧಿಸದಿದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೀವೇ ಆದೇಶ ನೀಡಿದ್ದಿರಿ. ಆದರೆ ಅದಕ್ಕೆ ಬೆಲೆಯಿಲ್ಲದಂತೆ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ ಎಂದು ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಡಿಸಿ ಗಮನಕ್ಕೆ ತಂದರು.
ಆನ್ಲೈನ್ನಲ್ಲಿ ಇಸಿ ಸಿಗುತ್ತಿಲ್ಲ. ಮಧ್ಯವರ್ತಿಗಳಿಗೆ ನೇರವಾಗಿ ಸಿಗುತ್ದೆ! ಇತರೆ ಕಚೇರಿಗಳಂತೆಯೆ ಇಲ್ಲಿ ನೇರವಾಗಿ ಅರ್ಜಿ ಕೊಡುವ ಪರಿಪಾಠವಿಲ್ಲ. ಎಲ್ಲದನ್ನೂ ಬ್ರೋಕರ್ಗಳೇ ನಿರ್ವಹಣೆ ಮಾಡುತ್ತಿದ್ದಾರೆ. ಒಂದು ನೊಂದಣಿಗೆ ಸರಾಸರಿ 15 ಸಾವಿರ ರೂ. ವಸೂಲಾಗುತ್ತಿದೆ ಎಂದು ದೂರಿದರು.
ಸಿಬ್ಬಂದಿಗೆ ಶೋಕಾಸ್ ನೋಟಿಸ್
ಜಮೀನಿನಲ್ಲಿನ 32 ಸಾಗುವಾನಿ ಮರ ಕಟಾವಿಗೆ ಅರಣ್ಯ ಇಲಾಖೆ ಅನುಮತಿಗಾಗಿ ಮಾಲೀಕತ್ವ ದೃಢೀಕರಣ ಪತ್ರ ನೀಡಲು ಅಲೆಸುತ್ತಿದ್ದಾರೆಂದು ಕಬ್ಬೂರಿನ ನಿವೃತ್ತ ಶಿಕ್ಷಕ ಜಿ.ಎನ್. ವೀರೇಶ್ ಹೇಳಿದರು. ಅಪೂರ್ಣ ಮಾಹಿತಿಯುಳ್ಳ ಕಡತ ಕಳುಹಿಸಿದ ಕಾರಣಕ್ಕೆ ಕಚೇರಿಯ ಕೇಸ್ ವರ್ಕರ್ ನಾಗರಾಜ್ಗೆ ಶೋಕಾಸ್ ನೋಟಿಸ್ ನೀಡುವಂತೆ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರಿಗೆ ಡಿಸಿ ಸೂಚಿಸಿದರು.