ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲಾದ್ಯಂತ ಮಂಗಳವಾರ ನಡೆಯಲಿರುವ ಬಲಿಪಾಡ್ಯಮಿ ಹಬ್ಬಕ್ಕೆ ಎಪಿಎಂಸಿ ಆವರಣದ ಸಗಟು ಹೂವಿನ ಮಾರುಕಟ್ಟೆ ವಿವಿಧ ಬಗೆಯ ಪುಷ್ಪಗಳ ರಾಶಿಯಿಂದ ಸೋಮವಾರ ಭರ್ತಿಯಾಗಿತ್ತು.
ಪುಷ್ಪಗಳ ಖರೀದಿಗಾಗಿ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೂ ಒಳಗೆ ಪ್ರವೇಶಿಸಲು ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ವ್ಯಾಪಾರದ ಭರಾಟೆ ಜೋರಾಗಿತ್ತು. ಆದರೆ, ಪ್ರತಿ ವರ್ಷ ಹಬ್ಬದಲ್ಲಿ ಗುಣಮಟ್ಟದ ಹಳದಿ, ಬಿಳಿ, ಕೆಂಪು, ನೇರಳೆ ಸೇರಿ ವಿವಿಧ ವರ್ಣದ ಸೇವಂತಿಯ 4ರಿಂದ 6 ಮಾರು ಪುಷ್ಪಕ್ಕೆ ತಲಾ 1ಸಾವಿರ ರೂ.ನಂತೆ ಮಾರಾಟವಾಗುತ್ತಿತ್ತು.
ಈ ಬಾರಿ ರೂ. 100ಕ್ಕೆ ಎರಡ್ಮೂರು ಮಾರಿನಂತೆ ಮಾರಾಟವಾದ ಕಾರಣ ಹೂ ಬೆಳೆಗಾರರಿಗೆ ಸಿಹಿಗಿಂತ ಕಹಿ ಹೆಚ್ಚಾಗಿ, ಬರದ ಮಧ್ಯೆ ಇನ್ನಷ್ಟು ಬರೆ ಬಿದ್ದಂತಾಯಿತು. ತಾಲೂಕಿನಲ್ಲಿ ಹೇರಳವಾಗಿ ಬೆಳೆದದ್ದು ಕೂಡ ದರ ಇಳಿಯಲು ಕಾರಣವೆಂದು ಬೆಳೆಗಾರರು ಬೇಸರಿಸಿದರು.