ಚಿತ್ರದುರ್ಗ: ವ್ಯಕ್ತಿ ಹೊರಗಿನಿಂದ ಸುಂದರವಾಗಿ ಕಂಡರೂ ಆತನು ಆಂತರ್ಯದಲ್ಲಿರುವ ಹುಸಿತನ ಹೊರಹಾಕಿ ಸಾತ್ವಿಕ ಜೀವನ ನಡೆಸಬೇಕು ಎಂದು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಶ್ರೀ ಮುರುಘಾ ಮಠದ ಅನುಭವ ಮಂಟಪದಲ್ಲಿ ಎಸ್ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಬುಧವಾರ ಆಯೋಜಿಸಿದ್ದ 30ನೇ ವರ್ಷದ 2ನೇ ತಿಂಗಳ ಸಾಮೂಹಿಕ ವಿವಾಹ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾತ್ವಿಕತೆಯಿಂದ ಕೂಡಿದ ಆರೋಗ್ಯ ಪೂರ್ಣ ಬದುಕು ನಮ್ಮದಾಗಬೇಕು. ಎಲ್ಲಿ ಧನ್ಯತೆ ಇರುತ್ತದೋ ಅಲ್ಲಿ ಮಾನ್ಯತೆ ದೊರೆಯುತ್ತದೆ. ಕೆಲವರು ಮೋಸ ಮಾಡುವುದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ವಂಚನೆ ಗಟ್ಟಿ ಮಾರ್ಗವಲ್ಲ, ಅದು ದುರ್ಮಾರ್ಗ. ಯಾರಿಗೂ ವಂಚನೆ ಮಾರ್ಗ ಸಲ್ಲದು ಎಂದರು.
ಡಿಡಿಪಿಐ ರವಿಶಂಕರರೆಡ್ಡಿ ಮಾತನಾಡಿ, ಮುರುಘಾ ಮಠ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಿರಂತರ ನಡೆಸಿಕೊಂಡು ಬಂದಿರುವ ಏಕೈಕ ಮಠವಾಗಿದೆ. ಇಲ್ಲಿ ಮದುವೆ ಮಾಡಿಕೊಂಡ ದಂಪತಿ ನಿಜಕ್ಕೂ ಭಾಗ್ಯವಂತರು. ನವ ಜೋಡಿಗಳು ಬದುಕಿನಲ್ಲಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ದಾಸೋಹಿ ಪ್ರೊ.ಪಿ. ಪ್ರಾಣೇಶ್ ಕಾಸವರಹಟ್ಟಿ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ ಇತರರಿದ್ದರು. 25 ಜೋಡಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟವು. ಜಮುರಾ ಕಲಾಲೋಕದ ಕಲಾವಿದರು ಪ್ರಾರ್ಥಿಸಿದರು. ವಚನಕಮ್ಮಟ ನಿರ್ದೇಶಕ ಪ್ರೊ.ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.