ಸಂಕೇಶ್ವರ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಿಂದ 110 ಕೆವಿ ಸಾಮರ್ಥ್ಯದ ಐದು ನೂತನ ಘಟಕ ನಿರ್ಮಾಣದಿಂದ ಮುಂದಿನ 50 ವರ್ಷಗಳವರೆಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗಲಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಸಮೀಪದ ನಿಡಸೋಸಿ, ಆಲೂರ ಕೆ.ಎಂ. ಗ್ರಾಮಗಳಲ್ಲಿ ಗುರುವಾರ ನೂತನ ಟಿಸಿಗಳಿಗೆ ಚಾಲನೆ ನೀಡಿ ಮಾತನಾಡಿ, ಈಗಾಗಲೇ ಬೆಲ್ಲದ ಬಾಗೇವಾಡಿ, ಸುಲ್ತಾನಪುರ ಗ್ರಾಮಗಳಲ್ಲಿ 110 ಕೆವಿ ಸಾಮರ್ಥ್ಯದ ಘಟಕ ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಿಡಸೋಸಿ, ಬೆಳವಿ, ಶೇಕಿನ ಹೊಸೂರ ಗ್ರಾಮಗಳಲ್ಲಿ ಸ್ಟೇಷನ್ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಿಂದ ಗ್ರಾಹಕ, ರೈತ, ಔದ್ಯೋಗಿಕ ಉದ್ದಿಮೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಎಂದರು.
ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ತೋಟದ ಗುಂಪು ಮನೆಗಳಿಗೂ ಸಹ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಕಲ್ಪಿಸಬೇಕೆಂಬ ದಿಸೆಯಲ್ಲಿ 40 ಕೋಟಿ ರೂ.ವೆಚ್ಚದ ಪ್ರಸ್ತಾವನೆ ಸಲ್ಲಿಸಿದ್ದು, ತ್ವರಿತಗತಿಯಲ್ಲಿ ಸರ್ಕಾರ ಮಂಜೂರಾತಿ ನೀಡುವ ಭರವಸೆಯಿದೆ ಎಂದರು.
ಕೇಸ್ತಿ ಗ್ರಾಮದ ಮಲ್ಲಪ್ಪ ಲೋಹಾರ ಮನೆಗೆ ಇತ್ತೀಚೆಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿಯಾಗಿತ್ತು. ಕುಟುಂಬಕ್ಕೆ ಧೈರ್ಯ ತುಂಬಿ ಸರ್ಕಾರದಿಂದ ಅನುಕೂಲ ಒದಗಿಸಿಕೊಡಲಾಗುವುದು ಎಂದರು.
ಪ್ರಶಾಂತ ಪಾಟೀಲ, ಸುಭಾಷ ಪಾಟೀಲ, ಶಿವಶಂಕರ ಬಾಡಕರ, ಮಹಾಲಿಂಗ ಮಗದುಮ್ಮ, ಮಹಾವೀರ ಖಾನಾಪೂರಿ, ನಾಗೇಶ ಸಂಕಣ್ಣವರ, ಪರಶುರಾಮ ಪಾಟೀಲ ಇತರರು ಇದ್ದರು.