ಕಡೂರು: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು. ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ಜಲಸ್ತಂಭನ ಮಾಡಲಾಯಿತು.
ಸ್ವಾಮಿಗೆ ವಿಶೇಷ ಮಹಾಮಂಗಳಾರತಿ ಸಲ್ಲಿಸಿ, ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಧ್ಯಾಹ್ನ 3.30ಕ್ಕೆ ಆರಂಭವಾದ ಮೆರವಣಿಗೆ ಕೆಎಲ್ವಿ ವೃತ್ತ, ಜೈನ್ ಟೆಂಪಲ್ ರಸ್ತೆ, ಕದಂಬ ವೃತ್ತ, ಪುರಸಭೆ ರಸ್ತೆ ಮೂಲಕ ಕೆ.ಎಂ.ರಸ್ತೆ ಮಾರ್ಗವಾಗಿ ಸುಭಾಷ್ ನಗರದಿಂದ ಕೆ.ಹೊಸಳ್ಳಿ ಕಲ್ಯಾಣಿಯವರೆಗೂ ನಡೆಯಿತು.
ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ಕೇಸರಿ ಬಾವುಟಗಳು ರಾರಾಜಿಸಿದವು. ಯುವಕರು ಕೇಸರಿ ಶಲ್ಯಗಳನ್ನು ಧರಿಸಿ ಗಮನಸೆಳೆದರು. ಪುನೀತ್ ರಾಜ್ಕುಮಾರ್ ಭಾವಚಿತ್ರವನ್ನು ಹಿಡಿದು ಯುವಕರು ಹೆಜ್ಜೆ ಹಾಕಿದರು. ಮಾರ್ಗ ಮಧ್ಯದಲ್ಲಿ ಅಪ್ಪು ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು.
ಸಂಜೆಯಾಗುತ್ತಿದ್ದಂತೆ ಮೆರವಣಿಗೆಯಲ್ಲಿ ಯುವಕರ ಸಂಖ್ಯೆ ಹೆಚ್ಚಾಯಿತು. ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಸಾಗಿದ್ದರಿಂದ ಒಂದು ತಾಸಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಯಿತು. ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ತರೀಕೆರೆ ಡಿವೈಎಸ್ಪಿ ನಾಗರಾಜ್, ಸಿಪಿಐ ಆರ್.ಶಿವಕುಮಾರ್ ನೇತೃತ್ವದಲ್ಲಿ ಪಿಎಸ್ಐಗಳಾದ ರಮ್ಯಾ, ಹರೀಶ್, ನವೀನ್, ವಿಶ್ವನಾಥ್, ಶೋಭಾ, ಲೀಲಾವತಿ, ಶಶಿಕುಮಾರ್, ಪವಿತ್ರಾ ಮತ್ತಿತರರು ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದರು.
ಮೆರವಣಿಗೆಯಲ್ಲಿ ಸಮಿತಿ ಅಧ್ಯಕ್ಷ ಅಭಿಷೇಕ್ ಬಿಂಗಾ, ವಿಕಾಸ್ ಚಂದ್ರು, ಸಚ್ಚಿನ್, ಮಂಜುನಾಥ್ ಜೈನ್, ಚೇತನ್, ಅಡಕೆ ಚಂದ್ರು, ನಾಗೇಂದ್ರ ಅಗ್ನಿ, ಚೌಳಹಿರಿಯೂರು ರವಿ, ಪೃಥ್ವಿ, ಕೆ.ಪಿ.ಶ್ರೀನಿವಾಸ್, ಶಶಾಂಕ್, ಮುಖಂಡರಾದ ಕೆ.ಬಿ.ಸೋಮೇಶ್, ಚಿನ್ನರಾಜು, ಮಲ್ಲಿದೇವಿಹಳ್ಳಿ ಸತೀಶ್, ಚೇತನ್ ಕೆಂಪರಾಜ್, ಪುರಸಭಾ ಸದಸ್ಯೆ ಮಂಜುಳಾ, ಗಿಡ್ಡಿ ಚೇತನ್ ಇತರರಿದ್ದರು.