ಧಾರವಾಡ: ಲಾಕ್ಡೌನ್ನಿಂದಾಗಿ 2 ವಾರದ ಹಸುಗೂಸಿನೊಂದಿಗೆ ಬಾಣಂತಿಯೊಬ್ಬಳು ಟಾಟಾಏಸ್ ವಾಹನದಲ್ಲಿ ದಿನ ದೂಡುವ ಸಂಕಷ್ಟ ತಂದೊಡ್ಡಿದೆ.
ಲಾಕ್ಡೌನ್ಗೂ ಮುಂಚೆ ಧಾರವಾಡ ಹಾಗೂ ಹಾವೇರಿ ಗಡಿಭಾಗದ ಗ್ರಾಮಗಳ ಹೆಳವ ಸಮುದಾಯದ 30ರಷ್ಟು ಜನರು ಜಿಲ್ಲೆಯ ಹಳಿಯಾಳ ರಸ್ತೆಯ ಹಳ್ಳಿಗಳಲ್ಲಿ ಸಂಚರಿಸುತ್ತ ತಾಲೂಕಿನ ಬಣದೂರ ಗ್ರಾಮ ದತ್ತ ಬಂದಿದ್ದರು. ತಮ್ಮೂರು ಸೇರಬೇಕು ಎನ್ನುವಷ್ಟರಲ್ಲಿ ಕರೊನಾ ಲಾಕ್ಡೌನ್ ಜಾರಿಯಾಗಿ ಹೆಳವ ಸಮುದಾಯದ ಹಲವು ಕುಟುಂಬಗಳು ಬಣದೂರಿನ ಬಯಲಿನಲ್ಲೇ ಲಾಕ್ ಆಗಿವೆ.
ಸರಸ್ವತಿ ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಬೈಕ್ ಮೇಲೆ ಕರೆದೊಯ್ದು ಹೆರಿಗೆ ಮಾಡಿಸಲಾಗಿದೆ. ಬಣದೂರ ಗ್ರಾಮದ ಬಯಲಿನಲ್ಲಿ ಅನಿವಾರ್ಯವಾಗಿ ಟಾಟಾಏಸ್ ಗೂಡ್ಸ್ ವಾಹನದಲ್ಲೇ ಬಾಣಂತನ ನಡೆದಿದೆ. ಗೂಡ್ಸ್ ವಾಹನದ ಹಿಂಭಾಗಕ್ಕೆ ಕೌದಿ, ಹೊದಿಕೆಗಳನ್ನು ಹಾಕಿ ಕೋಣೆಯನ್ನಾಗಿ ಮಾಡಿ ಹೆಣ್ಣು ಹಸುಗೂಸಿನ ಆರೈಕೆ ಮಾಡುತ್ತಿದ್ದಾರೆ. ಕುಟುಂಬದ ಬಳಿ ಇರುವ ರೇಷನ್ ಖಾಲಿಯಾಗುತ್ತಿದ್ದು, ಮುಂದೆ ಹೊಟ್ಟೆಪಾಡಿಗೆ ಏನು ಎನ್ನುವ ಚಿಂತೆ ಕಾಡುತ್ತಿದೆ.