ನರಗುಂದ: ಆಳೆತ್ತರ ಬೆಳೆದ ಹತ್ತಿಯನ್ನು ದುಷ್ಕರ್ವಿುಗಳು ರಾತ್ರೋರಾತ್ರಿ ಕಡಿದು ಹಾಕಿದ ಘಟನೆ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಕುರುಗೋವಿನಕೊಪ್ಪ ಗ್ರಾಮದ ಬಸಪ್ಪ ನಾಗಪ್ಪ ಚಂದ್ರ ಅವರ 2 ಎಕರೆ 9 ಗುಂಟೆ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆಯನ್ನು ಅಲ್ಲಲ್ಲಿ ನಾಶಪಡಿಸಲಾಗಿದೆ.
ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ರೈತ ಬಸಪ್ಪ ಅವರು ಪತ್ನಿ ಕಸ್ತೂರೆವ್ವ ಜತೆಗೆ ಕಳೆ ತೆಗೆಯಲು ಹೊಲಕ್ಕೆ ಬಂದಾಗ ಬೆಳೆ ನಾಶವಾಗಿರುವುದು ಕಂಡುಬಂದಿದೆ. ರೈತ ಬಸಪ್ಪ ಸ್ವಂತ 1 ಎಕರೆ 4 ಗುಂಟೆ ಜಮೀನಿನಲ್ಲಿ ಹಾಗೂ ಲಾವಣಿ ಮಾಡಿದ ಅಣ್ಣನ 1 ಎಕರೆ 5 ಗುಂಟೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದಾರೆ. ಆಳೆತ್ತರ ಸಮೃದ್ಧವಾಗಿ ಬೆಳೆದ ಹತ್ತಿಯನ್ನು ದುಷ್ಕರ್ವಿುಗಳು ರಾತ್ರೋರಾತ್ರಿ ಕುಡುಗೋಲಿನಿಂದ ಅಲ್ಲಲ್ಲಿ ಕಡಿದು ಹಾಕಿದ್ದಾರೆ. ಇದರಿಂದ ಅಂದಾಜು 1 ಎಕರೆಯಷ್ಟು ಫಸಲು ಹಾಳಾಗಿದೆ.
ಪ್ರತಿ ಎಕರೆಗೆ 10,000 ರೂ. ಲಾವಣಿ, ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿ 30 ರಿಂದ 35 ಸಾವಿರ ರೂ. ಖರ್ಚು ಮಾಡಲಾಗಿದೆ. ಹತ್ತಿ ಬೆಳೆ ಕಡಿದು ಹಾಕಿದವರನ್ನು ಪೊಲೀಸರು ಪತ್ತೆ ಹಚ್ಚಬೇಕು ಎಂದು ರೈತ ಬಸಪ್ಪ ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ತಾಪಂ ಸದಸ್ಯ ಗಿರೀಶ ನೀಲರಡ್ಡಿ ಅವರು ಬೆಳೆ ಹಾನಿ ಪರಿಶೀಲಿಸಿ, ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ರೈತ ದಂಪತಿಗೆ ಆತ್ಮಸ್ಥೈರ್ಯ ತುಂಬಿದರು. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.