ಸಾಗರ: ಸಾಗರ ತಾಪಂ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಹಕ್ರೆ ವಿರುದ್ಧ ಅವಿಶ್ವಾಸ ಮಂಡನೆ ಸಭೆ ಕರೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ತಾಪಂನ 11 ಸದಸ್ಯರು ಜನವರಿ 31ರಂದು ಡಿಸಿಗೆ ಮನವಿ ಮಾಡಿ, ತಾಪಂ ಅಧ್ಯಕ್ಷರು ನಿಗದಿತ ಸಮಯದಲ್ಲಿ ಸಾಮಾನ್ಯ ಸಭೆ ಕರೆಯುತ್ತಿಲ್ಲ, ಕಾರ್ಯವೈಖರಿ ತೃಪ್ತಿ ತಂದಿಲ್ಲ. ಕಳೆದ ಎರಡು ವರ್ಷಗಳಿಂದ ಕ್ರಿಯಾಯೋಜನೆಯನ್ನು ಸಕಾಲದಲ್ಲಿ ಮಂಜೂರು ಮಾಡಿಸದೆ ಇರುವುದು ಮುಂತಾದ ಕಾರಣ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.10ರ ಪತ್ರದಲ್ಲಿ ಜಿಲ್ಲಾಧಿಕಾರಿಗಳು ಮಲ್ಲಿಕಾರ್ಜುನ ಹಕ್ರೆ ವಿರುದ್ಧ ಅವಿಶ್ವಾಸ ಮಂಡನೆಯ ಸಭೆ ಕರೆಯುವಂತೆ ತಾಪಂ ಇಒಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಒಟ್ಟು ತಾಪಂ ಬಲಾಬಲ ಬಿಜೆಪಿ-6, ಕಾಂಗ್ರೆಸ್-4 ಜೆಡಿಎಸ್-2 ಪಕ್ಷೇತರ- 3 ಇದೆ.
ಮಾಜಿ-ಹಾಲಿ ಶಾಸಕರ ಒಗ್ಗಟ್ಟು: ಈ ಬಗ್ಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್ ಹಕ್ರೆ, ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಬೇಕೆಂದೇ ನನ್ನನ್ನು ಇಳಿಸುವ ಪ್ರಯತ್ನ ನಡೆಯುತ್ತಿದೆ. ಶಾಸಕ ಹಾಲಪ್ಪ ನನ್ನನ್ನು ಈ ಸ್ಥಾನದಿಂದ ಇಳಿಸುವಂತೆ ಸದಸ್ಯರಲ್ಲಿ ಕೋರಿಕೊಂಡಿದ್ದಾರೆ. ಕೆಲವು ಸಭೆಗಳಲ್ಲಿ ಇಬ್ಬರೂ ಒಟ್ಟಾಗಿ ಭಾಗವಹಿಸಿದಾಗ ಇರುಸು-ಮುರುಸಿನ ಪ್ರಸಂಗಗಳು ನಡೆದಿವೆ. ಮೊನ್ನೆ ಒಟ್ಟಾಗಿ ಸೇರಿ ಅವಿಶ್ವಾಸ ಮಂಡಿಸಲು ಸಹಿ ಹಾಕುವ ಸಂದರ್ಭದಲ್ಲಿ ಸಾಗರ ಪ್ರವಾಸಿಮಂದಿರದಲ್ಲಿ ಎಲ್ಲ ಸದಸ್ಯರ ಸಭೆಯ ನೇತೃತ್ವವನ್ನು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ವಹಿಸಿದ್ದು ಜಗಜ್ಜಾಹೀರಾಗಿದೆ. ಇದಕ್ಕೆಲ್ಲ ಸೂಕ್ತ ಸಂದರ್ಭದಲ್ಲಿ ನಾನು ಉತ್ತರ ಕೊಡುತ್ತೇನೆ ಎಂದರು.
ನನ್ನನ್ನು ಎಳೆದು ತರಬೇಡಿ: ಸುಮ್ಮನೆ ಈ ಪ್ರಕರಣದಲ್ಲಿ ನನ್ನನ್ನು ಎಳೆದುತಂದು ನಿಲ್ಲಿಸಬೇಡಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ನಾನು ಯಾವ ಸಭೆಯನ್ನೂ ಸಾಗರದ ಪ್ರವಾಸಿಮಂದಿರದಲ್ಲಿ ನಡೆಸಿಲ್ಲ. ಈ ಪ್ರಕರಣ ನನ್ನ ಕಿವಿಗೆ ಬಿದ್ದ ಕೂಡಲೆ ಸದಸ್ಯರನ್ನು ಕರೆದು ಹೊಂದಿಕೊಂಡು ಹೋಗಿ ಎಂದು ಮಾತ್ರ ಹೇಳಿದ್ದೇನೆ. ಕಳೆದ ಎರಡು ತಿಂಗಳಿಂದ ಸಾಗರ ಕ್ಷೇತ್ರದಲ್ಲಿ ನಾನು ಹಳ್ಳಿಗಳಿಗೆ ಓಡಾಟ ಮಾಡುತ್ತಿರುವುದು ಹೌದು. ಬರಲಿರುವ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರ ಸಹಕಾರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ ಎಂದರು.
ಕಾಂಗ್ರೆಸ್ನ ಆಂತರಿಕ ಕಲಹ: ಶಾಸಕ ಹಾಲಪ್ಪ ಯಾರ ಜತೆಯಲ್ಲಿಯೂ ಈ ಸಂಬಂಧ ಮಾತುಕತೆ ಮಾಡಿಲ್ಲ. ಅವರು ಎಂದಿಗೂ ಅನೈತಿಕ ರಾಜಕಾರಣ ಮಾಡುವುದಿಲ್ಲ. ಅವಿಶ್ವಾಸ ಮಂಡನೆಯಾದರೆ ಮುಂದೆ ನಾವು ಏನು ಮಾಡಬೇಕು ಎನ್ನುವ ಬಗ್ಗೆ ರ್ಚಚಿಸಿ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.