ಮಾಗಡಿ : ಯಾವುದೇ ಚುನಾವಣೆಯಾದರೂ ಸ್ವಂತ ಶಕ್ತಿ ಆಧಾರದ ಮೇಲೆ ಬಿಜೆಪಿ ಗೆಲ್ಲುತ್ತದೆ. ಇದಕ್ಕಾಗಿ ಅದು ಅನ್ಯಪಕ್ಷಗಳನ್ನು ಅವಲಂಬಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬುಧವಾರ ಪಟ್ಟಣಕ್ಕೆ ಬಂದಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಎಂಎಲ್ಸಿ ಚುನಾವಣೆ ಹಿನ್ನೆಲೆ ಯಲ್ಲಿ ಬಿಜೆಪಿ ನಾಯಕರು ಪ್ರವಾಸ ಕೈಗೊಂಡಿದ್ದಾರೆ. ಗುರುವಾರ (ನ.25) ಮೈಸೂರು- ಚಾಮರಾಜನಗರ, ಡಿ.1ರಂದು ಮಂಡ್ಯ, ಬೀದರ್ ಬಳಿಕ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಪ್ರವಾಸ ಹಮ್ಮಿಕೊಂಡಿರುವುದಾಗಿ ಮಾಹಿತಿ ನೀಡಿದರು.
ಕನಿಷ್ಠ 15 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಅಧ್ಯಕ್ಷ ನಳೀನ್ಕುಮಾರ್ ಕಟೀಲ್, ಮಾಜಿ ಸಿಎಂ, ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ಸೇರಿ ಕಾರ್ಯಕರ್ತರು, ಮುಖಂಡರು ಶ್ರಮಿಸುತ್ತಿದ್ದಾರೆ. ಈ ಗುರಿಸಾಧನೆಯಾಗುವ ವಿಶ್ವಾಸ ಇದೆ ಎಂದರು.
ಜನಸ್ವರಾಜ್ ಯಾತ್ರೆ ಪಕ್ಷ ಸಂಘಟನೆ ಮತ್ತು ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ನಡೆಯುತ್ತಿದೆ. ನಂತರ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿ, ಪಕ್ಷವನ್ನು ಸದೃಢಗೊಳಿಸಿ ಮುಂದಿನ ವಿಧಾನಸಭಾ ಚುನಾವಣೆಗೆ ಸಜ್ಜುಗೊಳಿಸಲಾಗುವುದು. ಅತಿಹೆಚ್ಚು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟು, ಮುಂದಿನ ಬಾರಿಯೂ ಬಿಜೆಪಿ ಸರ್ಕಾರ ರಚನೆಯಾಗುವಂತೆ ಮಾಡಲಾಗುವುದು ಎಂದು ಹೇಳಿದರು. ಕೆಆರ್ಐಡಿಎಲ್ ನಿಗಮ ಅಧ್ಯಕ್ಷ ಎಂ. ರುದ್ರೇಶ್, ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಪುರಸಭೆ ಸದಸ್ಯರಾದ ಶಿವರುದ್ರಮ್ಮ ವಿಜಯ್ ಕುಮಾರ್, ಅನಿಲ್ ಕುಮಾರ್, ರೇಖಾ ನವೀನ್, ಕುಮಾರ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ್ ಇದ್ದರು.
ಮಾಗಡಿಯಲ್ಲಿ ಸಂಘಟನೆ ಬಲವಾಗಿದೆ : ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿಯ ಶಾಸಕರು ಇದ್ದರು. ನಂತರದಲ್ಲಿ ಅಲ್ಲಿ ಮತ್ತೊಮ್ಮೆ ಗೆಲ್ಲಲು ಸಾಧ್ಯವಾಗದಿದ್ದರೂ ಪಕ್ಷದ ಸಂಘಟನೆ ಬಲವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಮರ್ಥ, ಯೋಗ್ಯ ಅಭ್ಯರ್ಥಿಯನ್ನು ಅಲ್ಲಿ ಕಣಕ್ಕಿಳಿಸಿ, ಗೆಲ್ಲುವ ಗುರಿ ಹೊಂದಲಾಗಿದೆ ಎಂದು ವಿಜಯೇಂದ್ರ ಹೇಳಿದರು.