ಕೆಜಿಎಫ್: ನಗರಸಭೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸೋಮವಾರ ಲೋಕಾಯುಕ್ತ ಎಸ್ಪಿ ಟಿ.ವೆಂಕಟೇಶ್ ಸ್ಥಳ ಪರಿಶೀಲನೆ ನಡೆಸಿದರು.
ಕಾಮಗಾರಿಗಳಲ್ಲಿ ಕಳಪೆ, ಅಂದಾಜಿಗಿಂತ ಕಡಿಮೆ ಮಟ್ಟದ ಕಾಮಗಾರಿಗಳು ನಡೆದಿವೆ ಎಂದು ಮಾಜಿ ಶಾಸಕ ಎಸ್.ರಾಜೇಂದ್ರನ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಗಳ ಗುಣಮಟ್ಟದ ಪರಿಶೀಲಿಸಿದ್ದು, ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ವೆಂಕಟೇಶ್ ತಿಳಿಸಿದರು.
ಎಸ್.ರಾಜೇಂದ್ರನ್ ಮಾತನಾಡಿ, ನಗರದಲ್ಲಿ ನಡೆದಿರುವ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ನಷ್ಟವಾಗಿದೆ. ನಗರಸಭೆಯಿಂದ ಕಳಪೆ ಕಾಮಗಾರಿ ನಡೆದಿರುತ್ತದೆ. ಅಮೃತ ಸಿಟಿ ಯೋಜನೆಯಡಿ ಪಾದಚಾರಿ ಪಥವು 6 ಅಡಿ ಇರಬೇಕಾಗಿತ್ತು, ಆದರೆ ಕೆಲವೆಡೆ ಎರಡು/ಮೂರು ಅಡಿಗಳು ಮಾತ್ರ ಇದೆ. ಅದೇ ರೀತಿ ಬೋರ್ವೆಲ್ ಕೊರೆದಿದ್ದು, ಕೇವಲ ಒಂದನ್ನು ಕೊರೆದು ಮೂರು ಕಡೆ ಕೊರೆದಿರುವುದಾಗಿ ಬಿಲ್ ತೋರಿಸಿದ್ದಾರೆ. ಮೋಟರ್ಗಳನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಹಳೇ ಮೋಟರ್ಗಳನ್ನು ನಗರಸಭೆಗೆ ಕೊಡಬೇಕಾಗಿದ್ದು, ಇದುವರೆಗೂ ಯಾವುದೇ ಬೋರ್ವೆಲ್ ಮೋಟಾರ್ಗಳನ್ನು ನಗರಸಭೆಗೆ ಒಪ್ಪಿಸಿರುವುದಿಲ್ಲ. ಇದರಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಶೌಚಗೃಹ ನಿರ್ಮಿಸುವಾಗ ಫಲಾನುಭವಿಗಳ ಹಣವನ್ನು ಸಂದಾಯ ಮಾಡಿದ ನಂತರ ಫಲಾನುಭವಿಗಳಿಂದ ಹಣ ವಾಪಸ್ ಪಡೆದಿರುವ ಟನೆಯೂ ಇದೆ. ನಗರಸಭೆ ಮುಂಭಾಗದಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣ ಕಾಮಗಾರಿಯು ನೀಲಿನೆಯಂತೆ ನಡೆದಿಲ್ಲ, ಬಿಜಿಎಂಎಲ್ ಭಾಗದಲ್ಲಿ ಬಿಜಿಎಂಎಲ್ ಅನುಮತಿ ಪಡೆಯದೇ ಪಾರ್ಕ್ ನಿರ್ಮಿಸಿರುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು, ನಗರಸಭೆಗೆ ಸೇರಿದ ಅಂಗಡಿಗಳ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಅನುಮತಿ ಪಡೆಯದೆ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ನ್ಯಾಯಾಲಯ ಆದೇಶ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲೋಕಾಯುಕ್ತ ವೃತ್ತ ನಿರೀಕ್ಷಕ ಯಶವಂತ ಕುಮಾರ್, ಪೌರಾಯುಕ್ತ ನವೀನ್ಕುಮಾರ್, ಲೋಕೋಪಯೋಗಿ ಇಲಾಖೆಯ ರಾಜಶೇಖರ್ ಹಾಜರಿದ್ದರು.