ಪರಶುರಾಮಪುರ: ಕರೊನಾ ಸೋಂಕು ನಿಯಂತ್ರಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಸಿಪಿಐ ಇ. ಆನಂದಪ್ಪ ತಿಳಿಸಿದರು.
ಗ್ರಾಮದ ಆರಕ್ಷಕ ಠಾಣೆ ಆವರಣದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಕರೊನಾ ಜಾಗೃತಿ ಹಾಗೂ ಹೋಬಳಿಯ ಪೊಲೀಸ್ ಬೀಟ್ನ ಕುಂದು-ಕೊರತೆಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ನೆರೆಯ ಆಂಧ್ರಪ್ರದೇಶದಲ್ಲಿ ಸಂಬಂಧಿಕರಿದ್ದಾರೆಂಬ ನೆಪ ಹೇಳಿ ಪದೇ ಪದೆ ಹೋಗಿ-ಬರುವವರು, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ವಿವಿ ಸಾಗರದಿಂದ ಈಗಾಗಲೇ ವೇದಾವತಿಗೆ ನೀರು ಹರಿದುಬಂದಿದೆ. ನದಿ ಪಾತ್ರದ ಬ್ಯಾರೇಜ್ ಬಳಿ ಮಕ್ಕಳು, ಮಹಿಳೆಯರು ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಎಂ.ಆರ್. ರುದ್ರೇಶ, ವಿವಿಧ ಗ್ರಾಮಗಳ ಮುಖಂಡರಾದ ಗುಜ್ಜಾರಪ್ಪ, ಶ್ರೀಕಂಠಪ್ಪ, ಡಿವಿಕೆ ಸ್ವಾಮಿ, ತಿಪ್ಪೇಸ್ವಾಮಿ, ವೀರೇಶ, ಎಎಸ್ಐ ರೇವಣಸಿದ್ದೇಶ್ವರ ಇದ್ದರು.