ಮುಳಬಾಗಿಲು: ವಿವಿಧ ವಸತಿ ಯೋಜನೆಗಳ ಮೂಲಕ ಸರ್ಕಾರ ವಸತಿ ರಹಿತರಿಗೆ ಮನೆ ನೀಡುತ್ತಿದೆಯಾದರೂ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬ ಗಾದೆಯಂತೆ
ಈ ಯೋಜನೆಗಳನ್ನು ಅರ್ಹ ಲಾನುಭವಿಗಳಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದಕ್ಕೆ ಸಷ್ಪ ಉದಾಹರಣೆ ಕೆಂಪಾಪುರದ ಬಡ ಮಹಿಳೆ ಗೋವಿಂದಮ್ಮ.
ತಾಲೂಕಿನ ಆವನಿ ಗ್ರಾಪಂ ವ್ಯಾಪ್ತಿಯ ಕೆಂಪಾಪುರದಲ್ಲಿ 5 ವರ್ಷದ ಹಿಂದೆ ಪತಿ ನಾಗರಾಜ್ನನ್ನು ಕಳೆದುಕೊಂಡ ಬಡ ವಿಧವೆ ಗೋವಿಂದಮ್ಮಗುಡಿಸಲಲ್ಲಿ ವಾಸಿಸುತ್ತಿದ್ದು,
ಈವರೆಗೆ ಇವರಿಗೆ ಸೂರು ಒದಗಿಸಲು ಯಾರೂ ಮುಂದೆ ಬಂದಿಲ್ಲ. ಗೋವಿಂದಮ್ಮನಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿಯಿದ್ದಾರೆ.
ಪುತ್ರಿ ನಾಗವೇಣಿ ಮದುವೆಯಾದ ವರ್ಷದಲ್ಲಿಯೇ ಆಕೆಯ ಪತಿ ಅಪಘಾತದಲ್ಲಿ ಮೃತಪಟ್ಟಿದ್ದು, ಮಗಳ ಜವಾಬ್ದಾರಿಯೂ ಗೋವಿಂದಮ್ಮನ ಮೇಲೆ ಬಿದ್ದಿದೆ.
ಇಬ್ಬರು ಪುತ್ರರಲ್ಲಿ ಒಬ್ಬ ಮಗ ಓದು ಬಿಟ್ಟು, ಕೂಲಿ ಕೆಲಸಕ್ಕೆ ಸೇರಿದ್ದಾನೆ. ಇತ್ತ ಮಗಳು ನಾಗವೇಣಿ ಬಾಣಂತಿ ಆದ್ದರಿಂದ ಆಕೆಯ ಆರೈಕೆಗಾಗಿ ಮನೆಯಲ್ಲೇ ಉಳಿದಿರುವ ಗೋವಿಂದಮ್ಮನ ಬದುಕು ದುಸ್ತರವಾಗಿದೆ.
ಚಳಿ, ಗಾಳಿಯೊಂದಿಗೆ ನಿರಂತರ ಸುರಿಯುತ್ತಿರುವ ಮಳೆಯಿಂದ ರಕ್ಷಣೆ ಪಡೆಯಲು ಮುರುಕಲು ಗುಡಿಸಲಿಗೆ ಟಾರ್ಪಲ್ ಹೊದಿಸಿ ಜೀವನ ಸಾಗಿಸುತ್ತಿದ್ದಾಳೆ. ಇದು ಸಾಲದೆಂಬಂತೆ ವಿಧವಾ ವೇತನ ಸಹ ಬರುವುದು ನಿಂತುಹೋಗಿದೆ.
ವಿಧವಾ ವೇತನ ಬರುವ ಅಕೌಂಟ್ಗೆ ಕೆವೈಸಿ ಮಾಡದ ಕಾರಣ ಪರಿಹಾರ ಧನ ಬರುತ್ತಿಲ್ಲ. ಆದರೆ ಅನಕ್ಷರಸ್ಥೆ ಗೋವಿಂದಮ್ಮನಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಆವನಿ ಗ್ರಾ.ಪಂ.ಗೆ ಮನೆ ನಿರ್ಮಿಸಿಕೊಡುವಂತೆ ಅನೇಕ ಬಾರಿ ಅರ್ಜಿ ಸಲ್ಲಿಸಿದರೂ ಈವರೆಗೂ ಪ್ರಯೋಜನವಾಗಿಲ್ಲ.
ಯಾವುದೇ ಮನೆ ಮಂಜೂರು ಮಾಡದ ಕಾರಣ ಮುರುಕಲು ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಗ್ರಾಪಂ ವತಿಯಿಂದ ಗೋವಿಂದಮ್ಮನಿಗೆ ಮನೆ ನೀಡಿದರೆ ಕಟ್ಟಿಸಿಕೊಳ್ಳಲೂ ಅವರಿಗೆ ಶಕ್ತಿ ಇಲ್ಲ. ದಾನಿಗಳು ಅವರ ನೆರವಿಗೆ ಬಂದು ಮನೆ ನಿರ್ಮಿಸಿಕೊಟ್ಟರೆ ಆಶ್ರಯ ಯೋಜನೆಯಲ್ಲಿ ಗ್ರಾಪಂನಿಂದ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ.
5 ವರ್ಷಗಳಿಂದ ಬೇರೆಯವರ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದೇನೆ. ಗಂಡ ಮೃತಪಟ್ಟಿದ್ದು, ಆರು ತಿಂಗಳ ಹಿಂದೆ ಅಳಿಯನೂ ಸಾವಿಗೀಡಾಗಿದ್ದಾನೆ. ಈಗ ಮಗಳ ಯೋಗಕ್ಷೇಮ, ಮಗುವಿನ ಆರೈಕೆ ನನ್ನ ಹೆಗಲಿಗೆ ಬಂದಿದ್ದು, ಸಂಸಾರ ಸಾಗಿಸುವುದು ಕಷ್ಟ್ಟಕರವಾಗಿದೆ.
ಗೋವಿಂದಮ್ಮ, ಕೆಂಪಾಪುರ
ಗೋವಿಂದಮ್ಮ ಮನೆಗೆ ಭೇಟಿ ನೀಡಿ, ಗ್ರಾಪಂನಿಂದ ತಕ್ಷಣವೇ ವರದಿ ತರಿಸಿ, ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಮನೆ ನಿಮಾರ್ಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
ಡಾ.ಕೆ.ಸರ್ವೇಶ್, ತಾಪಂ ಇಒ ಮುಳಬಾಗಿಲು
ವಸತಿ ಯೋಜನೆಯಲ್ಲಿ ಮನೆಗಳನ್ನು ಈ ಹಿಂದೆಯೇ ನೀಡಲಾಗಿದ್ದು, ಪಾಯ ಹಾಕಿಕೊಂಡರೆ ಮಾತ್ರ ಬಿಲ್ ಮಾಡಲು ಸಾಧ್ಯ. ಮತ್ತೊಮ್ಮೆ ಅವರಿಗೆ ಮನೆ ನಿರ್ಮಿಸಿಕೊಡಲಾಗುವುದು.
ವರದರಾಜ್ ಪಿ.ಡಿ.ಒ. ಆವನಿ ಗ್ರಾಪಂ