ವಿಜಯಪುರ: ಡೊಳ್ಳಿನ ವಾದ್ಯ ವೈಭವ, ಕಹಳೆ ನಿನಾದ, ಹಲಗೆ ಮೇಳ ಹಾಗೂ ಲಂಬಾಣಿ ಸಾಂಸ್ಕೃತಿಕ ನೃತ್ಯದ ಸೊಬಗು ಸೇರಿದಂತೆ ಹತ್ತು ಹಲವು ಕಲಾ ಪ್ರಕಾರ ಗಳ ಪ್ರದರ್ಶನ ಕಾಂಗ್ರೆಸ್ ನ ಬೃಹತ್ ಸಾರ್ವಜನಿಕ ಸಭೆಯ ಕಳೆ ಹೆಚ್ಚಿಸಿತು.
ಐತಿಹಾಸಿಕ ಗುಮಟ್ಟನಗರಿಯ ಬಿಎಲ್ ಡಿಈ ನ್ಯೂ ಕ್ಯಾಂಪಸ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾವೇಶ ಕಾಂಗ್ರೆಸ್ ಪ್ರಚಾರ ಕಣದ ರಂಗೇರಿಸಿತು.
ಕಾಂಗ್ರೆಸ್ ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಆಗಮನ ಹಿನ್ನೆಲೆ ಶರಣರು- ಸೂಫಿ ಸಂತರ ಬೀಡಾದ ವಿಜಯಪುರ ಭಾವೈಕ್ಯತೆಯ ಪ್ರತೀಕವಾಗಿ ಕಂಗೊಳಿಸಿತು.
ಹಿಂದು- ಮುಸಲ್ಮಾನ ಸೇರಿದಂತೆ ವಿವಿಧ ಜಾತಿ, ಧರ್ಮ, ಪಂಥದ ಜನ ತಮ್ಮ ತಮ್ಮ ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ ಬಣ್ಣ ಬಣ್ಣದ ಧ್ವಜಗಳು, ವೇಷ ಭೂಷಣಗಳು, ಕಲಾ ಪ್ರಕಾರಗಳು, ನೃತ್ಯ, ಹಾಡು ಮುಂತಾದ ವಾದ್ಯ- ವೈಭಗಳೊಂದಿಗೆ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಬೈಕ್ ರ್ಯಾಲಿಗಳು ಜನಾಕರ್ಷಿಸಿದವು. ಕೇಸರಿ ಬಿಳಿ ಹಸಿರು ಬಣ್ಣದ ಬಾವುಟಗಳು ರಾರಾಜಿಸಿದವು. ಯುವಕರು ರಾಹುಲ್ ಗಾಂಧಿ ಫೋಟೊ ಪ್ರದರ್ಶಿಸುತ್ತಾ “ನಮ್ಮ ನಡಿಗೆ ರಾಹುಲ್ ಗಾಂಧಿ ಕಡೆಗೆ” ಎಂಬ ಉದ್ಘೋಷ ಹೊರಹಾಕಿದರು. ವಿಶೇಷವಾಗಿ ಬಂಜಾರಾ ಹಾಗೂ ಹಾಲುಮತ ಸಂಸ್ಕೃತಿ ಯ ವೈಭವ ಎದ್ದು ಕಾಣಿಸುತ್ತಿತ್ತು. ಖ್ಯಾತ ಗಾಯಕರು ನಾಡು- ನುಡಿ, ಭಾವೈಕ್ಯತೆಯ ಹಾಡು ಹೇಳಿ ಜನಮನ ರಂಜಿಸಿದರು.