ಚಿತ್ರದುರ್ಗ: ಚಳ್ಳಕೆರೆ ತಾಲೂಕು ರಾಮಸಾಗರದ ತಿಪ್ಪೀರಮ್ಮ ಪಾಲಯ್ಯ ಅವರು ಸೀಬೆ ಬೆಳೆದು ಉತ್ತಮ ಆದಾಯ ಗಳಿಸುತ್ತಿರುವ ರೈತ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಏಳು ಎಕರೆ ಜಮೀನಿನಲ್ಲಿ ಈ ಹಿಂದೆ ಅತ್ಯಲ್ಪ ನೀರಿನಲ್ಲಿ ಈರುಳ್ಳಿ, ಟೊಮ್ಯೊಟೊ, ರಾಗಿ ಬೆಳೆಯುತ್ತಿದ್ದ ಇವರು, ಕಡಿಮೆ ನೀರನ್ನು ಬಯಸುವ ಖುಷ್ಕಿ ತೋಟಗಾರಿಕೆ ಬೆಳೆ, ಸೀಬೆ ಬೆಳೆಯಲು ಆರಂಭಿಸಿದ್ದಾರೆ.
ಇದಕ್ಕಾಗಿ ತೋಟಗಾರಿಕೆ ಇಲಾಖೆಯ ನರೇಗಾ ಸೌಲಭ್ಯವನ್ನು ಬಳಸಿಕೊಂಡು 2.20 ಎಕರೆಯಲ್ಲಿ ತೈವಾನ್ ಪಿಂಕ್ ತಳಿಯ ಸೀಬೆ ಬೆಳೆದಿದ್ದಾರೆ.
ವಿಜಯಪುರದಿಂದ ಪ್ರತಿ ಸಸಿಗೆ 45 ರೂ. ಗಳಂತೆ ಖರೀದಿಸಿ, 5/5 ಮೀ. ಅಂತರದಲ್ಲಿ ಅವುಗಳನ್ನು ನೆಟ್ಟು ಆರೈಕೆ ಮಾಡಿದ್ದಾರೆ. ಈಗ ಒಂದು ವರ್ಷದ ಗಿಡಗಳಲ್ಲಿ 1200 ಕೆ.ಜಿ.ಸೀಬೆ ಹಣ್ಣನ್ನು ಕಟಾವು ಮಾಡಿ ಚಳ್ಳಕೆರೆ ಹಾಗೂ ಚಿತ್ರದುರ್ಗದಲ್ಲಿ ಮಾರಾಟ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಇಳುವರಿಯ ನೀರಿಕ್ಷೆಯಲ್ಲಿದ್ದಾರೆಂದು ತೋಟಗಾರಿಕೆ ಇಲಾಖೆ ಡಿಡಿ ಸವಿತಾ ತಿಳಿಸಿದ್ದಾರೆ.