ತಿ.ನರಸೀಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವರುಣ ಕ್ಷೇತ್ರದಲ್ಲಿ ಸೋಲಿಸಲು ಬಹಳಷ್ಟು ಮಂದಿ ಒಳ ಸಂಚು ಮಾಡಿ ಹಣದ ಹೊಳೆಯನ್ನೇ ಹರಿಸುತ್ತಿದ್ದು, ಕ್ಷೇತ್ರದ ಜನತೆ ಯಾವುದೇ ಆಮಿಷಗಳಿಗೆ ಬಲಿಯಾಗಬಾರದೆಂದು ಚಲನಚಿತ್ರ ನಟ, ನಿರ್ದೇಶಕ ಹಾಗು ನಿರ್ಮಾಪಕ ಎಸ್.ನಾರಾಯಣ್ ಮನವಿ ಮಾಡಿದರು.
ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೇ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಅವರ ಪರವಾಗಿ ಮತಯಾಚನೆ ಮಾಡಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
ಸಿದ್ದರಾಮಯ್ಯ ಅವರನ್ನು ಸೋಲಿಸಲು ಅನೇಕರು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕ್ಷೇತ್ರದಾದ್ಯಂತ ಹಣವನ್ನು ಹೊಳೆಯಂತೆ ಹರಿಸಲಾಗುತ್ತಿದ್ದಾರೆ. ಆದರೆ ಸಿದ್ದು ಮೇಲೆ ನಿಮಗಿರುವ ಪ್ರೀತಿಯನ್ನು ಕೊಂಡುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಈ ಮಣ್ಣಲ್ಲಿ ಹುಟ್ಟಿದ ನಿಮ್ಮ ಮಗನ ಪರವಾಗಿ ಮತಯಾಚನೆಗೆ ನಾನು ಬಂದಿದ್ದೇನೆ. ನಾನಿಲ್ಲಿ ಬಂದ ಮೇಲೆ ಗೊತ್ತಾಯಿತು ಮತಯಾಚನೆ ಮಾಡೋದೇ ಬೇಕಿಲ್ಲ ಎಂದು. ಯಾಕೆಂದ್ರೆ ನೀವೀಗಾಗಲೇ ಸಿದ್ದರಾಮಯ್ಯರಿಗೆ ಬೆಂಬಲಿಸುವ ನಿರ್ಧಾರ ಮಾಡಿದ್ದೀರಾ, ಹಾಗಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿರುವಂತೆ ಇದು ಅವರ ಕೊನೆಯ ಚುನಾವಣೆಯಾಗಬಾರದು.
ಸಿದ್ದರಾಮಯ್ಯ ಅವರ ಧ್ವನಿಗೆ ತುಂಬಾ ಜನ ಹೆದರುತ್ತಾರೆ. ಆ ರೀತಿಯ ಗಟ್ಟಿಯಾದ ಧ್ವನಿ ಕಾಂಗ್ರೆಸ್ ಪಕ್ಷಕ್ಕೆ ಅವಶ್ಯಕವಾಗಿ ಬೇಕಿದೆ. ಹಾಗಾಗಿ ನಾವೆಲ್ಲರೂ ಈ ಚುನಾವಣೆ ಅವರ ಕೊನೆಯ ಚುನಾವಣೆಯಾಗಲು ಬಿಡಬಾರದು. ಕ್ಷೇತ್ರದ ಜನತೆ ಅವರನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದರು.
ಮೇ10 ಸ್ವಾತಂತ್ರ್ಯ ಕೊಡಿಸುವ ದಿನ : ಮೇ 10ರ ದಿನ ನಿಮ್ಮ ದಿನ, ರಾಜ್ಯದ ಜನತೆಗೆ ಸ್ವಾತಂತ್ರ್ಯಕೊಡಿಸುವ ದಿನವಾಗಿದೆ. ಯಾಕೆಂದರೆ ರಾಜ್ಯದಲ್ಲಿ 5 ವರ್ಷ ಕೆಟ್ಟ ಆಡಳಿತ ಇತ್ತು. ಅದರಿಂದ ಎಷ್ಟು ಕಷ್ಟ ಅನುಭವಿಸಿದ್ದೀರಿ ಎಂಬುದು ನಿಮಗೂ ಗೊತ್ತಿದೆ. ಕಷ್ಟದಿಂದ ಬಿಡುಗಡೆಯಾಗುವ ಕಾಲ ಸಮೀಪಿಸುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಒಳ್ಳೆಯ ಆಡಳಿತ ಕೊಡುತ್ತದೆ. ಪ್ರತಿ ಮನೆಯಲ್ಲೂ ಸಂತೋಷ ಮೂಡುವ ವಾತಾವರಣವನ್ನು ಕಾಂಗ್ರೆಸ್ ಪಕ್ಷ ನಿರ್ಮಾಣ ಮಾಡಿಕೊಡುತ್ತೆ ಹಾಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಗುರುತಿಗೆ ಎಲ್ಲರೂ ಮತ ನೀಡಿ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ನಾರಾಯಣ್ ಮನವಿ ಮಾಡಿದರು.
ಇದಕ್ಕೂ ಮೊದಲು ಗ್ರಾಮದ ಪ್ರತಿ ಬೀದಿಯ ಪ್ರತಿ ಮನೆ ಮನೆಗೆ ಪಾದಯಾತ್ರೆ ಮೂಲಕ ತೆರಳಿದ ನಾರಾಯಣ್ ಸಿದ್ದರಾಮಯ್ಯರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಹೊಸ ಕೋಟೆ ಗ್ರಾ.ಪಂ. ಅಧ್ಯಕ್ಷ ಆನಂದ್, ಉಪಾಧ್ಯಕ್ಷೆ ಚೆನ್ನಮ್ಮ, ನಟರಾಜು, ಸತೀಶ್, ರಾಜೇಂದ್ರ, ಗಂಗಾಧರ್, ಕಾವ್ಯಶ್ರೀ, ನಂದಿನಿ, ಹುಣಸೂರು ಬಸವಣ್ಣ, ರಾಜಪ್ಪ, ಮಲ್ಲೇಶ್, ಪುಟ್ಟಸ್ವಾಮಿ, ಗುತ್ತಿಗೆದಾರ ಮಾಧು ಮತ್ತಿತರರು ಇದ್ದರು.