ಶಿಕಾರಿಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೊನಾದಿಂದ ಶೀಘ್ರ ಗುಣರಾಗಲೆಂದು ಪ್ರಾರ್ಥಿಸಿ ಸೋಮವಾರ ಬೆಳಗ್ಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಪಕ್ಷದ ಕಾರ್ಯಕರ್ತರು ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕರೊನಾ ಅಟ್ಟಹಾಸದಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ. ಕಾರ್ಯಬಾಹುಳ್ಯ ದ ಪರಿಣಾಮ ಸಹಜವಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೂ ಸೋಂಕು ತಗುಲಿದೆ. ಕರೊನಾ ವಿರುದ್ಧ ರಾಜ್ಯ ಸರ್ಕಾರ ಹೋರಾಟ ನಡೆಸುತ್ತಿದೆ. ಸಿಎಂ ಶೀಘ್ರ ಗುಣಮುಖರಾಗಿ ಶೀಘ್ರ ಜನಸೇವೆಗೆ ಮರಳಬೇಕೆಂದು ಕ್ಷೇತ್ರದ ಅಧಿದೇವರಾದ ಶ್ರೀ ಹುಚ್ಚರಾಯಸ್ವಾಮಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದೇನೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಬಿ.ಚನ್ನವೀರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ನಗರಾಧ್ಯಕ್ಷ ಟಿ.ಎಸ್.ಮೋಹನ್, ಪುರಸಭೆ ಸದಸ್ಯರಾದ ಜೀನಳ್ಳಿ ಪ್ರಶಾಂತ್, ರೇಣುಕಸ್ವಾಮಿ, ನಾಗರಾಜ್, ವಸಂತಗೌಡ, ಹಾಪ್ಕಾಮ್್ಸ ನಿರ್ದೇಶಕ ಚಾರಗಲ್ಲಿ ಪರಶುರಾಮ, ಸುಕೇಂದ್ರಪ್ಪ, ವಿದ್ಯಾರ್ಥಿ ಮುಖಂಡ ಬೆಣ್ಣೆ ಪ್ರವೀಣ ಇತರರಿದ್ದರು.
ತೊಗರ್ಸಿ ಮಠಗಳಲ್ಲಿ ಸಂಕಲ್ಪ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೊನಾಮುಕ್ತರಾಗಿ ಶೀಘ್ರ ಹೊರಬರಲಿ ಎಂದು ಪ್ರಾರ್ಥಿಸಿ ತಾಲೂಕಿನ ತೊಗರ್ಸಿಯ ಮಠಗಳಲ್ಲಿ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಮತ್ತು ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ, ಶ್ರೀ ಮಳೆ ಮಲ್ಲೇಶ್ವರ ಸ್ವಾಮಿಗೆ, ಶ್ರೀ ಮರುಳ ಸಿದ್ಧೇಶ್ವರ ಸ್ವಾಮಿಗೆ ಹಾಗೂ ಶ್ರೀ ವೀರಭದ್ರ ದೇವರಿಗೆ ವಿಶೇಷ ಸಂಕಲ್ಪ ಪೂಜೆ ನೆರವೇರಿಸಲಾಯಿತು.
ಯಡಿಯೂರಪ್ಪ ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳಬೇಕು. ನಾಡಿನಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಸರ್ವಜನಾಂಗದ ಹಿತ ಕಾಯಬೇಕೆಂದು ಎರಡೂ ಮಠಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ದೈವಾನುಗ್ರಹ ಮತ್ತು ಗುರುಗಳ ಅಭಯ ಅನುಗ್ರಹ ಆಶೀರ್ವಾದದಿಂದ ಶೀಘ್ರ ಗುಣಮುಖರಾಗುತ್ತಾರೆ ಎಂದು ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಇದ್ದರು.